ಕನ್ನಡವನ್ನು ಕೊಲ್ಲುವ ಕೆಲಸ!












ಹೌದು, ನೀವು ಸರಿಯಾಗಿ ಓದಿದ್ದೀರಿ. ಈ ಕೆಲಸವನ್ನು ಮಾಡುತ್ತಿರುವುದು ಬೇರೆ ಯಾರೂ ಅಲ್ಲ. ಸ್ವತಃ ರಾಜ್ಯ ಶಿಕ್ಷಣ ಇಲಾಖೆ. ಹೇಗೆ? ನೀವು ಈ ವರ್ಷ ಹೊಸದಾಗಿ ಪರಿಷ್ಕೃತಗೊಂಡ 1ನೇ ತರಗತಿಯ ಕನ್ನಡ ಪುಸ್ತಕಗಳನ್ನು ತೆಗೆದುನೋಡಿ. ಇಡೀ ಪುಸ್ತಕದ ಸೃಷ್ಟಿಯೇ ಕನ್ನಡವನ್ನು ಕೊಲೆ ಮಾಡಲೆಂದೇ  ಆಗಿದೆ ಎನ್ನುವಂತೆ ಭಾಸವಾಗುತ್ತದೆ. ಕನ್ನಡದ ಕಾಗುಣಿತ ಕಲಿಸುವ ಮೊದಲೇ ವಂದನೆ ಪದ್ಯ ಶುರುವಾಗುತ್ತದೆ. ಮಗುವಿನ ಕಲ್ಪನೆ ಅಪ್ಪ, ಅಮ್ಮನಿಂದ ಮುಂದೆ ಹೋಗುವ ಮೊದಲೇ ರೈತ, ಯೋಧ, ವೈದ್ಯೆ ಎಲ್ಲಾ ಬರುತ್ತಾರೆ. ಇದರಲ್ಲಿ ತಪ್ಪೇನಿದೆ ಎಂದು ನೀವು ಕೇಳಬಹುದು!

ಅಂತೆಯೇ ಕತೆಗಳು, ಹಾಡುಗಳು, ಶಬ್ಧಗಳು ಎಲ್ಲವೂ ಆಗ ತಾನೆ ಶಾಲೆಗೆ ಕಾಲಿಟ್ಟ ಮಗುವಿನ ಎದುರು ಒಮ್ಮೆಲೆ ಪ್ರತ್ಯಕ್ಷವಾಗುತ್ತವೆ. ಅಷ್ಟು ದೊಡ್ಡ ಹಾಡುಗಳು, ಕತೆಗಳನ್ನು ಹೇಳಲು ಕಲಿಯುವುದಷ್ಟೇ ಅಲ್ಲ, ಅದರಲ್ಲಿ ಬರುವ ಶಬ್ಧಗಳು, ಅರ್ಥಗಳು, ಯಾರು ಯಾರಿಗೆ ಯಾವ ಸಂದರ್ಭದಲ್ಲಿ ಹೇಳಿದರು ಎಂದು ಹೇಳುವುದು ಮತ್ತು ಬರೆಯುವುದೂ ಸಹ ಸೇರಿವೆ! ಎಂದರೆ ಇದು ಯಾವ ವಯಸ್ಸಿನ ಮಕ್ಕಳ ಪುಸ್ತಕ ಎಂಬ ಗೊಂದಲಕ್ಕೆ ಬೀಳಿಸುತ್ತದೆ. ಇನ್ನು ಕಾಗುಣಿತ ಕಲಿಸುವಿಕೆಯೂ ದೊಡ್ಡ ಗೊಂದಲ. ಮಗುವಿಗೆ ನೆನಪಿಟ್ಟುಕೊಳ್ಳಲು ಸುಲಭವಾಗುವ ಯಾವುದೇ ತಂತ್ರಗಳು ಇಲ್ಲಿಲ್ಲ.

ನೆನಪಿಟ್ಟುಕೊಳ್ಳಲು ಸಹಾಯವಾಗುವ ಸೀಕ್ವೆನ್ಸಿಂಗ್ , ಲಿಂಕಿಂಗ್ ವಿಧಾನಗಳು ಈ ಮೊದಲು ಇದ್ದವು. ಉದಾಹರಣೆಗೆ ಅ, ಆ, ಇ, ಈ ಈ ರೀತಿ. ಈಗ ಅ ಒಮ್ಮೆ ಬಂದರೆ ಆ ಇನ್ನೆಲ್ಲೊ ಬರುತ್ತದೆ. ಯಾವತ್ತೋ ಕಲಿತಿರುವ ಅ, ಆ ಗಳನ್ನು ಈ ಒಂದನೆ ತರಗತಿಯ ಮಗು ಗುರುತಿಸಿ ಹೇಳಬೇಕು ಎನ್ನುವ ಕಲ್ಪನೆ ಈ ಪಠ್ಯಕ್ರಮ ಸಿದ್ಧಪಡಿಸಿರುವವರ ಯೋಚನೆಯಂತಿದೆ. ಮಗು ಅದಾಗಲೇ ಕನ್ನಡ ಅಕ್ಷರಗಳನ್ನು ಕಲಿತು ಬಂದಿರುತ್ತದೆ ಎಂಬ ಗ್ರಹಿಕೆಯಲ್ಲಿ ಈ ಪಠ್ಯ ಸಿದ್ಧಪಡಿಸಿರುವ ಹಾಗೆ ತೋರುತ್ತದೆ. ಆದರೆ ಮಗು ಕನ್ನಡದ ಅ, ಆ , ಇ, ಈ ಸಹ ಕಲಿತಿರಲಿಕ್ಕಿಲ್ಲ ಎನ್ನುವುದಕ್ಕೆ ಸಾಕಷ್ಟು ಸಾಕ್ಷಗಳು ದೊರೆಯುತ್ತವೆ. ಅವರ ಗಮನಕ್ಕೆ ಬಂದಿಲ್ಲವೆಂತಲೇ ಹೇಳಬೇಕಾದ ವಿಷಯಗಳಿವೆ.

1.      ವಿಶ್ವಸಂಸ್ಥೆ ಮತ್ತು ಭಾರತದ ಮಕ್ಕಳ ತಜ್ಞರು 6 ವರ್ಷಗಳೊಳಗೆ ಮಗುವಿನ ಗ್ರಿಪ್ಪಿಂಗ್ ಸರಿಯಾಗಿ ಬಂದಿರುವುದಿಲ್ಲ. ಅದಕ್ಕಾಗಿ ನಲಿ, ಕಲಿ  ವಿಧಾನದಲ್ಲಿ ನಿಧಾನವಾಗಿ ಬರೆಸುವ ಪ್ರಕ್ರಿಯೆ ಶುರುವಾಗಬೇಕು ಎನ್ನುತ್ತಾರೆ. ಶಿಕ್ಷಣ ತಜ್ಞೆ ಮರಿಯಾ ಮಾಂಟೆಸರಿ 6 ವರ್ಷಗಳೊಳಗಿನ ಮಗುವಿಗೆ ಬರೆಸುವುದೇ ದೊಡ್ಡ ತಪ್ಪು ಎನ್ನುತ್ತಾರೆ. ಆದರೆ ಇಲ್ಲಿ 6 ವರ್ಷದ ಮಗು ಅದಾಗಲೇ ಕನ್ನಡದ ಅ, ಆ , ಇ, ಈ ಕಲಿತಿರಬೇಕು ಅಥವಾ ಕಲಿತಿರುತ್ತದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಭಾವಿಸಲಾಗಿದೆ.

2.     ಈಗ 1ನೇ ತರಗತಿಗೆ ಹಾಜರಾದ ಮಕ್ಕಳಲ್ಲಿ 7-8 ವರ್ಷಗಳ ಮಕ್ಕಳೂ ಇದ್ದಾರೆ. ಕೊರೊನ ಕಾಲದಲ್ಲಿ ಮನೆಯಲ್ಲೇ ಉಳಿದ ಮಕ್ಕಳು ಈಗ ಒಂದನೇ ತರಗತಿಗೆ ದಾಖಲಾಗಿದ್ದಾರೆ. ಅವರೊಂದಿಗೆ 5-6 ವರ್ಷಗಳ ಮಗುವೂ ಸೇರಿಕೊಂಡಿದೆ. ಇಲ್ಲಿ 7-8ನೇ ವಯಸ್ಸಿನಲ್ಲಿರುವ ಎರಡು, ಮೂರನೇ ತರಗತಿಯಲ್ಲಿರಬಹುದಾದ ಮಗು ಕೆಲವೊಂದು ಪಾಠಗಳನ್ನು ಬೇಗನೇ , ಹೆಚ್ಚು ಪರಿಣಾಮಕಾರಿಯಾಗಿ ಕಲಿಯುತ್ತದೆ. 5-6ನೇ ವಯಸ್ಸಿನ ಮಗು ಹಿಂದುಳಿಯುತ್ತದೆ. ಇದು ಕಲಿಸುವ ವಿಷಯದಲ್ಲಿ ತಾರತಮ್ಯವನ್ನು ಸೃಷ್ಟಿಸುತ್ತಿದೆ.

3.     ಅದೇ ಸಿಬಿಎಸ್ ಸಿ ಪಠ್ಯಕ್ರಮದ ಹಿಂದಿ ಪಾಠಗಳನ್ನು ನೋಡಿದರೆ ಎಲ್ಲೂ ಹಿಂದಿಯನ್ನು ಮಗು ಅದಾಗಲೇ ಕಲಿತು ಬಂದಿದೆ ಎಂದು ಪರಿಗಣಿಸುವುದಿಲ್ಲ. ಈಗಷ್ಟೇ ವ್ಯವಸ್ಥಿತವಾಗಿ, ನೆನಪಿಟ್ಟುಕೊಳ್ಳಲು ಸುಲಭವಾಗುವ ಹಾಗೆ ನಿಧಾನವಾಗಿ ಕಲಿಸಲಾಗುತ್ತದೆ. ಜನಪ್ರಿಯ ಆಂಗ್ಲಭಾಷೆಯನ್ನೂ ಸಹ ವಾಕ್ಯಗಳನ್ನು ಬರೆಸುವ ಹಂತಕ್ಕೆ ಕೊಂಡೊಯ್ಯುವುದಿಲ್ಲ. ಮೊದಲಿಗೆ ಅಕ್ಷರಗಳು, ನಂತರ ಆ ಅಕ್ಷರಗಳ ವ್ಯತ್ಯಾಸಗಳು (ಸ್ವರ ಮತ್ತು ವ್ಯಂಜನ), ಅವು ಶಬ್ಧಗಳಾಗುವ ಬಗೆ ಫೋನಿಕ್ಸ್ ಮತ್ತು ವರ್ಲ್ಡ್ ಫ್ಯಾಮಿಲಿ ಹೀಗೆ ಕಲಿಕೆ ವ್ಯವಸ್ಥಿತವಾಗಿದೆ.

4.    ಪ್ಲೆವೇ ವಿಧಾನದಲ್ಲಿರಲಿ, ಮಾಂಟೆಸರಿಯಲ್ಲಿರಲಿ ಕನ್ನಡದ ಕಾಗುಣಿತ ಮನೆಯಲ್ಲಿ ಹೇಳಿಕೊಡದ ಹೊರತು 3-6 ವರ್ಷಗಳ ಒಳಗಿನ ಮಗು ಕಲಿಯತಿರುವುದು ಬಹಳ ಅಪರೂಪ. ಇನ್ನೂ ಆಡಿಕೊಂಡಿರುವ ವಯಸ್ಸಿನಲ್ಲಿ ಅದಾಗಲೇ ಸಾಕಷ್ಟು ಮಾಹಿತಿಗಳು, ಹಾಡುಗಳು ಎಲ್ಲವನ್ನೂ ಆಂಗ್ಲಭಾಷೆಯಲ್ಲಿ ಕಲಿತಿರುತ್ತದೆ. ಮನೆಯಲ್ಲಿ ದೊಡ್ಡವರು ಹೇಳಿಕೊಟ್ಟರೂ ಅದು ಹೊರಗಿನ ಈ ಕಲಿಕೆಯ ಜೊತೆಗೆ ಮಗುವಿಗೆ ಭಾರವೆ. ಇನ್ನು ಅಂಗನವಾಡಿಯಲ್ಲಿ ಕಲಿತ ಮಗು ಎಂತಿಟ್ಟುಕೊಂಡರೂ ಕನ್ನಡ ಶಾಲೆಗೆ ದಾಖಲಾಗುವಾಗ ಕನ್ನಡ ಕಾಗುಣಿತ ಕಲಿತಿರುವುದೂ ಕಷ್ಟ. ಕನ್ನಡ ಶಾಲೆಗೆ ಸೇರುತ್ತದೆಯೇ ಹೊರತು ಸಿಬಿಎಸ್ ಸಿ ರಾಷ್ಟ್ರೀಯ ಪಠ್ಯಕ್ರಮಕ್ಕೆ ದಾಖಲಾಗುವುದು ವಿರಳಾತಿವಿರಳ. ಪಠ್ಯಕ್ರಮ ಸಿದ್ಧಪಡಿಸಿದವರ ಈ ಗ್ರಹಿಕೆಯೂ ಇಲ್ಲಿ ಸೋಲುತ್ತದೆ.

5.     ಅತಿಯಾದ ಸಂಸ್ಕೃತ ಶಬ್ಧಗಳು ಇದರಲ್ಲಿವೆ. ಕನ್ನಡ ಭಾಷೆಯ ಶಬ್ಧಗಳನ್ನು ತೆಗೆದರೆ ಶೇ.10-20 ರಷ್ಟು ಮಾತ್ರ ಕಾಣಸಿಗುತ್ತದೆ. ದಿನಬಳಕೆಯ ಶಬ್ಧಗಳು ಇಲ್ಲವೇ ಇಲ್ಲ ಎನ್ನಬಹುದು. ಇದೂ ಸಹ ಮಕ್ಕಳನ್ನು ಕನ್ನಡದಿಂದ ದೂರ ಮಾಡುವ ಕೆಲಸವೇ ಆಗಿದೆ.

ಪರಿಣಾಮ ಏನು?

ಭಾಷೆಯ ಮೇಲೆ

·         ಮಗು ಕನ್ನಡವೆಂದರೆ ಕಷ್ಟದ ವಿಷಯ ಎಂದು ಭಾವಿಸುತ್ತದೆ. ವರ್ಷ ಕೊನೆಗೊಳ್ಳುವ ಹೊತ್ತಿಗೆ ಕನ್ನಡವನ್ನು ದ್ವೇಷಿಸುತ್ತದೆ.

·         ವಿದ್ಯಾರ್ಥಿಗಳ ಮಧ್ಯೆ ಕಲಿಕೆಯ ತಾರತಮ್ಯ ಹೆಚ್ಚಾಗುತ್ತದೆ.

·         ಮಗುವಿನ ಮಾನಸಿಕ ಒತ್ತಡ ಹೆಚ್ಚಾಗುತ್ತದೆ,

·         ಕನ್ನಡವೂ ಸೇರಿದಂತೆ ಉಳಿದ ವಿಷಯಗಳ ಬರವಣಿಗೆಯಲ್ಲೂ ಹಿಂದೆ ಬೀಳುತ್ತದೆ.

·         ಮಗು ಬೆಳೆದ ಹಾಗೆಲ್ಲ ಸುಲಭವಾಗಿ, ಸರಳವಾಗಿ ಕಲಿಸಿದ ಆಂಗ್ಲ ಮತ್ತು ಹಿಂದಿ ಭಾಷೆಗಳನ್ನು ಹೆಚ್ಚು ಇಷ್ಟಪಡುತ್ತ, ಅರಳುವ ಮೊದಲೇ ಬಿರಿದ ಹೂವಿನ ಹಾಗೆ ಕನ್ನಡ ಭಾಷೆಯ ಕಲಿಕೆಯಲ್ಲಿ ನಲುಗುತ್ತದೆ. ಕನ್ನಡವನ್ನು ಸುಪ್ತವಾಗಿ ದ್ವೇಷಿಸುತ್ತದೆ. ಅದರ ಫಲವನ್ನು ಈಗಾಗಲೇ 50% ರಷ್ಟು ಯುವಜನಾಂಗದಲ್ಲಿ ಕಾಣುತ್ತಿದ್ದೇವೆ. ಆ ಅಂಶ 100% ರಷ್ಟಾಗಲು ಏನೇನು ಮಾಡಬೇಕೊ ಅದೆಲ್ಲವನ್ನೂ ಈ ಪಠ್ಯಕ್ರಮ ಮಾಡಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

 

ಮಗುವಿನ ಮಾನಸಿಕ ಆರೋಗ್ಯದ ಮೇಲೆ – ಆರು ವರ್ಷದ ಮಗು ಈಗ ಕೇವಲ ಕಾಗುಣಿತ, ಮಗ್ಗಿ ಕಲಿಯುವುದಿಲ್ಲ. ಕನ್ನಡ, ಹಿಂದಿ, ಇಂಗ್ಲಿಷ್, ಗಣಿತ, ಸಮಾಜ ವಿಜ್ಞಾನ ಮತ್ತು ಕಂಪ್ಯೂಟರ್ ಇಷ್ಟನ್ನು ಕಲಿಯುತ್ತಿರುತ್ತದೆ. ಕನ್ನಡವನ್ನು ಒಂದೇ ವರುಷದಲ್ಲಿ ಹೇಳಿಕೊಡಲು ಹೊರಟಾಗ ಮಗುವಿನ ಮೇಲೆ ಅದಾಗಲೇ ಇರುವ ಒತ್ತಡಕ್ಕೆ ಇನ್ನಷ್ಟು ಸೇರಿಸಿದಂತಾಗುತ್ತದೆ. ಒತ್ತಡ ಹೆಚ್ಚಾಗುವುದರ ಪರಿಣಾಮ ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತದೆ, ಶಾಲೆಗೆ ಹೋಗಲು ನಿರಾಕರಿಸುತ್ತದೆ. ತನ್ನ ಒತ್ತಡ, ಆತಂಕಗಳನ್ನು ಮೀರಲು ಮೊಬೈಲ್ ನೋಡುವುದು, ದುಶ್ಚಟಗಳಿಗೆ  ಬೀಳುವುದು ಮತ್ತಿತರ ಅಡ್ಡದಾರಿಯನ್ನು ಹಿಡಿಯುತ್ತದೆ.  ದೈಹಿಕ ಆರೋಗ್ಯದ ಮೇಲೆ – ಆಗಿನ್ನೂ ಪೆನ್ಸಿಲ್ ಹಿಡಿಯಲು ಕಲಿತ ಮಗು ಅಗತ್ಯಕ್ಕಿಂತ ಹೆಚ್ಚು ಬರೆದಾಗ ಕೈನೋವಿನಿಂದ ನರಳುತ್ತದೆ. ಇನ್ನೂ ಬಲಿತಿಲ್ಲದ ಕೈಯ ನರಗಳ ಮೇಲೆ ಪರಿಣಾಮವಾಗುತ್ತದೆ. ಒತ್ತಡದಿಂದಾಗಿ ಮನೋದೈಹಿಕ ಸಮಸ್ಯೆಗಳಾದ ಜ್ವರ, ಭೇದಿ, ನೆಗಡಿ, ತಲೆನೋವಿನಂತಹ ಸಮಸ್ಯೆಗಳನ್ನು ಹೊಂದುತ್ತದೆ.

ನೈತಿಕ ಮೌಲ್ಯದ ಮೇಲೆ ಪರಿಣಾಮ – ಈ ಮಕ್ಕಳ ಒದ್ದಾಟ ನೋಡಲಾಗದೆ, ಮಕ್ಕಳು ಬರೆಯುವುದನ್ನು ನಿರಾಕರಿಸಿದಾಗ, ಪಾಲಕರು (ವಿಶೇಷವಾಗಿ ತಾಯಿ) ಖುದ್ದು ಬರೆದುಕೊಡುತ್ತಾರೆ. ಇದರಿಂದ ಮಕ್ಕಳು ಒಂದನೆ ತರಗತಿಯಿಂದಲೇ ಮೋಸ ಮಾಡುವುದನ್ನು ಪಾಲಕರಿಂದಲೇ ಕಲಿಯುತ್ತವೆ. ಕೇಳಿದಾಗ ಇಲ್ಲ, ನಾನೇ ಬರೆದಿದ್ದೇನೆ ಎಂದು ಸುಳ್ಳು ಹೇಳುವವರೂ ಇದ್ದಾರೆ. ಬೇರೆ ಮಕ್ಕಳಿಂದ ಬರೆಸಿಕೊಳ್ಳುವ , ಬರೆಸಿಕೊಳ್ಳಲು ಅವರು ಹೇಳಿದ್ದನ್ನು ಮಾಡುತ್ತಾರೆ. ಆ ಮೂಲಕ ಲಂಚ, ಲಾಬಿ ಎಲ್ಲಾ ಬೇಡದ ಗುಣಗಳನ್ನು ಕಲಿಯುತ್ತಿದ್ದಾರೆ.

ಶಿಕ್ಷಣದ ಮೇಲೆ – ಉರು ಹೊಡೆಯುವುದು/ ಬಾಯಿಪಾಠ ಮಾಡುವುದು ಕಲಿಯುತ್ತಾರೆ. ವಿಷಯಗಳ ಅಧ್ಯಯನಶೀಲ ಮನೋಭಾವನೆಯನ್ನು ಈ ಹಂತದಲ್ಲಿಯೇ ಕೊಲ್ಲಲಾಗುತ್ತಿದೆ. ಒಂದೇ ವಿಷಯವನ್ನು ಮರು ವರ್ಷಗಳಲ್ಲಿಯೂ ಕಲಿತು ಕಲಿತು ಬೇಸರವಾಗಿ ಶಾಲೆ, ಕಾಲೇಜುಗಳೆಂದರೆ ಓಡಿಹೋಗುವಂತಾಗಿದೆ.

 

 


ಪ್ರೇಕ್ಷಕ ವರ್ಗವು ಸಿನೆಮಾಗಿಂತಲೂ ಮಿಗಿಲಾದ ನಾಟಕಗಳನ್ನು ಅರ್ಥಮಾಡಿಕೊಂಡು ವಿವೇಚಿಸುತ್ತದೆಯೆ?

 ಕಾಶ್ಮೀರ್ ಪೈಲ್ಸ್ ಚಲನಚಿತ್ರವು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯಂತ ಕೆಟ್ಟಚಿತ್ರ ಮತ್ತು ಪ್ರಚಾರದ ಗಿಮಿಕ್ ಎಂದು ಹೀಗಳೆಯಲ್ಪಟ್ಟಿದೆ. ಯಥಾಪ್ರಕಾರ ಸಮಾಜದ ಒಂದು ಬಣ ನಿರ್ಣಾಯಕರಲ್ಲಿ ಒಬ್ಬ ತನ್ನದೇ ದೇಶದ ಮಾನ ತೆಗೆಯಲು ಹಿಂದು ಮುಂದು ನೋಡದ ವ್ಯಕ್ತಿ. ಆ ವ್ಯಕ್ತಿಯ ಮಾತನ್ನು ಯಾಕೆ ಅಷ್ಟು ಮಹತ್ವದ್ದಾಗಬೇಕು. ಅದೊಂದು ಉತ್ತಮ ಚಿತ್ರವಾಗಿರದಿದ್ದರೆ ಜನರು ಅದನ್ನು ಗೆಲ್ಲಿಸುತ್ತಿದ್ದರೆ? ಎಂದು ಪ್ರತಿಪಾದಿಸುತ್ತಿದ್ದಾರೆ. ಇನ್ನೊಂದು ಬಣ ಭಾರತದಲ್ಲಿ ನಡೆಯುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಿರ್ಣಾಯಕರನ್ನು ವಿದೇಶಗಳಿಂದ ಆಮಂತ್ರಿಸಲಾಗುತ್ತದೆ. ಖುದ್ದು ಸರ್ಕಾರವೇ ಇವರನ್ನು ನಿಯುಕ್ತಿಗೊಳಿಸುತ್ತದೆ. ಅವರಲ್ಲಿ ಯಾರೊಬ್ಬರು ಇಂತಹ ಚಕಾರಗಳನ್ನೆತ್ತಿದರೆ ತಪ್ಪೇನು? ಸತ್ಯವನ್ನು ಸತ್ಯವೆಂದು ಹೇಳಿದರೆ ಯಾಕೆ ಅಲ್ಲಗಳೆಯಬೇಕು? ಬೊಬ್ಬೆಹೊಡೆಯಬೇಕು? ಈ ಚಲನಚಿತ್ರವೊಂದು ಪಕ್ಷವೊಂದರ ಪ್ರಾಪಗೆಂಡ ಎನ್ನುವುದು ಸಾಬೀತಾಗಿದೆ. ಖುದ್ದು ಪ್ರಧಾನಮಂತ್ರಿಗಳೇ ಈ ಚಲನಚಿತ್ರದ ಮನರಂಜನಾ ತೆರಿಗೆಯನ್ನು ರದ್ದುಗೊಳಿಸಲು ಸೂಚಿಸಿದ್ದಾರೆ. ಒಂದು ಸಿನೆಮಾ ಕಲೆಯ ನೆಲೆಯಲ್ಲಿದ್ದರೆ ಅದು ಸಿನೆಮಾ. ಕಲೆಯ ಹೊರತಾಗಿ ರಾಜಕೀಯ ಉದ್ದೇಶವನ್ನೊಳಗೊಂಡರೆ ಅದು ಪ್ರಾಪಗಂಡವಲ್ಲದೆ ಇನ್ನೇನು? ಸಿಂಗಾಪುರದಲ್ಲಿ ಈ ಸಿನೆಮಾ ಎರಡು ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಪ್ರದರ್ಶನಕ್ಕೆ ಅನುಮತಿ ನೀಡಲಿಲ್ಲ. ಹರಿಯಾಣದಲ್ಲೂ ಈ ಸಿನೆಮಾಕ್ಕೆ ತೆರಿಗೆ ರದ್ದು ಮಾಡಲು ಸರ್ಕಾರ ಒಪ್ಪಲಿಲ್ಲ. ಕೋಮುಸಂಘರ್ಷದಲ್ಲಿ ಒಂದು ಸಮುದಾಯಕ್ಕೆ ಆದ ದೌರ್ಜನ್ಯ, ನೋವುಗಳು ಮತ್ತೊಂದು ಸಮುದಾಯದ ದೌರ್ಜನ್ಯ, ನೋವನ್ನು ಮುಚ್ಚಿಬಿಡುವುದಿಲ್ಲ. ಇಂತಹ ಸತ್ಯ ಮುಚ್ಚಿಡುವ, ಸತ್ಯದ ಹೆಸರಿನಲ್ಲಿ ಅರ್ಧ ಸುಳ್ಳಿನ ಸರಮಾಲೆಗಳನ್ನು ಸಮಾಜದಲ್ಲಿ ಪಸರಿಸಿ ಕಂದಕಗಳನ್ನು ದೊಡ್ಡ ಮಾಡುವುದು ರಾಜಕೀಯ ಹುನ್ನಾರವಲ್ಲದೆ ಇನ್ನೇನು? ಎಂದು ಕೇಳುತ್ತಿದೆ.

ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪರವಿರೋಧದ ಹೇಳಿಕೆಗಳು ಭರ್ತಿಯಾಗಿವೆ. ಕಾಶ್ಮೀರ ಫೈಲ್ಸ್ ಚಲನಚಿತ್ರದ ಮೊದಲ ದೃಶ್ಯವೇ ಇದೊಂದು ಪ್ರಾಪಗೆಂಡ ಎನ್ನುವುದನ್ನು ಪ್ರಮಾಣೀಕರಿಸುತ್ತದೆ. ಕೇವಲ ಅರ್ಧಗಂಟೆಯ ಚಿತ್ರ ನೋಡುವಷ್ಟರಲ್ಲಿ ಇದೊಂದು ದ್ವೇಷ ಬಿತ್ತುವ, ಒಂದು ಸಮುದಾಯವನ್ನು ಸಂಪೂರ್ಣವಾಗಿ ಖಳನಾಯಕನನ್ನಾಗಿಸುವ ದೊಡ್ಡ ಕ್ಯಾನ್ವಾಸಿನಲ್ಲಿ ಬರೆದ ಕ್ರೌರ್ಯದ ಚಿತ್ರಣವೆಂದಷ್ಟೇ ಅನಿಸುತ್ತದೆ. ಆ ನಂತರ ನಡೆಯುವ ಯಾವುದೇ ಭಾಷಣ, ಅತ್ಯಾಚಾರ, ಜೀವನ್ಮರಣದ ಹೋರಾಟಗಳೆಲ್ಲ ನೋಡುಗನಲ್ಲಿ ಉಸಿರುಗಟ್ಟಿಸುತ್ತದೆ. ಇದಕ್ಕೆ ಸತ್ಯದ ಸರ್ಟಿಫಿಕೇಟು ಕೊಡುವುದಾದರೆ ಇದು ಸಾಕ್ಷ್ಯಚಿತ್ರವೇ? ಅಲ್ಲ, ಒಂದು ಸಿನೆಮಾ. ಸಿನೇಮಾ ಎಂಬುದು ಬರಹವಿದ್ದಂತೆ. ಲೇಖಕನ ಮನಸ್ಥಿತಿಯ ಕನ್ನಡಿಯಂತೆ. ನಿರ್ದೇಶಕ, ನಿರ್ಮಾಪಕರ ಮನಸ್ಸಿನ ಕನ್ನಡಿಯಷ್ಟೆ. ಈ ಕನ್ನಡಿಯನ್ನೇ ಇಡೀ ಕಾಶ್ಮೀರಿ ಪಂಡಿತರ ಕನ್ನಡಿಯೂ ಹೌದು ಎನ್ನುವ ಹಾಗೆ ಬಿಂಬಿಸಿದ್ದು ರಾಜಕೀಯದ ಢಾಳ ಲೇಪನ ಈ ಚಿತ್ರಕ್ಕಿದೆಯೆಂಬುದನ್ನು ಪುಷ್ಟೀಕರಿಸುತ್ತದೆ. ಆದಾಗ್ಯೂ ಭಾರತೀಯ ಬಹುಸಂಖ್ಯಾತ ವರ್ಗವು ಇದೊಂದು ಹಸಿ ಸತ್ಯವೆಂದು ಬಾಯಿಂದ ಬಾಯಿಗೆ ಹರಡಿ ಕಣ್ಣುಬಿಟ್ಟುಕೊಂಡು ಪೂರ್ತಿ 2-50ಗಂಟೆಗಳ ಕಾಲ ನೋಡಿದೆಯೆಂದರೆ ನಮ್ಮ ಸಮಾಜದಲ್ಲಿ ಜನರ ಹೃದಯ ಮತ್ತು ಸ್ಪಂದನೆಗಳು ಯಾವ ರೀತಿ ನ್ಯಾಯ, ಅನ್ಯಾಯ ಮತ್ತು ಸತ್ಯ,ಅಸತ್ಯಗಳ ನಡುವಿನ ಅಂತರವನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿವೆ ಎನ್ನುವುದನ್ನು ತೋರಿಸುತ್ತದೆ. ಒಳಗಣ್ಣು ಮುಚ್ಚಿದ ಇಂತಹ ಬಹುಸಂಖ್ಯಾತ ಪ್ರೇಕ್ಷಕ ವರ್ಗವು ಸಮಾಜದಲ್ಲಿ ನಡೆಯುತ್ತಿರುವ ಸಿನೆಮಾಗಿಂತಲೂ ಮಿಗಿಲಾದ ನಾಟಕಗಳನ್ನು ಅರ್ಥಮಾಡಿಕೊಂಡು ವಿವೇಚಿಸುತ್ತದೆ ಎಂದು ನಂಬುವುದಾದರೂ ಹೇಗೆ?

ಪತಿಯ ಆಜ್ಞೆಯನ್ನು ಪತ್ನಿ ಪಾಲಿಸಬೇಕಾ?

ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಕಾಲಂವೊಂದರ ಶೀರ್ಷಿಕೆ ಇದು. ಇದರಲ್ಲಿ ವೃದ್ಧೆಯೊಬ್ಬಳು ಪಾರ್ವತಿಗೆ ಉಪದೇಶಮಾಡುವ ಸನ್ನಿವೇಶ ಬರುತ್ತದೆ. ಅದರಲ್ಲಿ ಆಕೆ ಗಂಡನೊಂದಿಗೆ ಹೇಗೆ ಇರಬೇಕೆಂದು ಉಪದೇಶಿಸುತ್ತಾಳೆ. 22ನೇ ಶತಮಾನದಲ್ಲೂ ಈ ಉಪದೇಶಗಳ ಪ್ರಸ್ತುತತೆ ಎಷ್ಟು? ಎಂಬ ಅರಿವು ಲೇಖಕರಿಗೆ ಇರಬೇಕಿತ್ತು ಎನ್ನುವುದು ಬಹುತೇಕ ವಾಚಕರ ಅಭಿಪ್ರಾಯ. ಅದೊಂದು ಪತ್ರಿಕಾಧರ್ಮಕ್ಕೇ ಅಪಚಾರ. ಕೋಮು ಭಾವನೆಯನ್ನು ಮೀರಿದ ಎಂದು ಬ್ರ್ಯಾಂಡ್ ಆದ ಜನಪ್ರಿಯ ದಿನಪತ್ರಿಕೆಯಲ್ಲಿ ಈ ರೀತಿಯ ಲೇಖನ ಪ್ರಕಟವಾಗುವುದು ಅಕ್ಷಮ್ಯ ಅಪರಾಧವೆಂತಲೇ ಒಂದು ವರ್ಗ ಪರಿಗಣಿಸಿತು. ಅವರಲ್ಲಿ ಬಹುತೇಕರು ಖುದ್ದು ಪತ್ರಿಕೆಗಳ ಬರಹಗಾರರು, ಲೇಖಕರು, ಸಾಹಿತಿಗಳು ಇನ್ನೂ ಏನೇನೊ. ಅವರು ಒಂದು ಸೂಕ್ಷ್ಮವನ್ನು ಅರಿಯದೇ ಘಟನೆಗೆ ಓವರ್ ರಿಯಾಕ್ಟ್ ಮಾಡಿದರೆಂದು ನನ್ನ ಭಾವನೆ.

ವೃತ್ತಪತ್ರಿಕೆಗಳಲ್ಲಿ ಈ ಅಚ್ಚಿಸುವ ಪ್ರಕ್ರಿಯೆ ಕೆಲವೊಮ್ಮೆ ತುರ್ತಾಗಿ ನಡೆಯುತ್ತದೆ. ಸಂಪಾದಕರ ಕಣ್ಣುತಪ್ಪಿ ಮುದ್ರಣಗೊಳ್ಳುತ್ತದೆ. ಇನ್ನು ಕೆಲವೊಮ್ಮೆ ಸುಮ್ಮನೆ ಓದಿ ವಿವೇಚನೆಯನ್ನು ಓದುಗನಿಗೆ ಬಿಡಲಾಗುತ್ತದೆ. ಬಹುಶಃ ಈ ಲೇಖನವನ್ನು ಓದಿ ತಲೆಬರಹ ಮಾತ್ರ ಹೀಗೆ ಕೊಟ್ಟಿರುವುದು ಮೂರನೆಯ ವರ್ಗಕ್ಕೆ ಸೇರಿದ್ದಾಗಿದೆ. ವಿವೇಚನೆಯನ್ನು ಓದುಗನಿಗೆ ಬಿಡಲಾಗಿದೆ. ಈ ಉಪದೇಶ ಇವತ್ತಿಗೆ ಅಪ್ರಸ್ತುತ ಎನ್ನುವವರು ಒಂದು ವಿಷಯವನ್ನು ಗಮನಿಸಬೇಕು. ಪ್ರಸ್ತುತ ಟಿವಿಗಳಲ್ಲಿ ಬರುವ ಜ್ಯೋತಿಷಿಗಳಲ್ಲಿ ಬಹುತೇಕರು ಇಂತಹ ಹಲವು ಉಪದೇಶಗಳನ್ನು ಮಾಡುತ್ತಾರೆ. ಇವುಗಳನ್ನು ನೋಡುವ ಎಷ್ಟೋ ಹೆಣ್ಣುಮಕ್ಕಳು ಯಾವ ಮಗ್ಗುಲಿನಲ್ಲಿ, ಯಾವ ಜಾವಕ್ಕೆ ಎದ್ದರೆ ಶುಭ ಎನ್ನುವುದರಿಂದ ಹಿಡಿದು ಈ ಪತಿ ಪುರಾಣಗಳವರೆಗೆ ಪಾಲಿಸುತ್ತಾರೆ. ಆ ಜ್ಯೋತಿಷಿ ಹೇಳಿದ್ದಷ್ಟೂ ಇವರಿಗೆ ವೇದವಾಕ್ಯ. ಇನ್ನು ಪ್ರಜಾವಾಣಿ ಬಿಟ್ಟು ಉಳಿದೆಲ್ಲ ಪತ್ರಿಕೆಗಳಲ್ಲೂ ಇಂತಹ ಆಚಾರ, ವಿಚಾರಗಳು ಪುಂಖಾನುಪುಂಖ ಹರಿಯುತ್ತವೆ. ಅವರು ಮಾಡದ ಒಂದೇ ಒಂದು ತಪ್ಪು ಎಂದರೆ ಇಂತಹ ``ಓದುಗನ ವಿವೇಚನೆ’’ಗೆ ಬಿಡುವ ತಲೆಬರಹವನ್ನು ಆ ಬರವಣಿಗೆಗಳಿಗೆ ನೀಡದಿರುವುದು.

ಇವತ್ತು ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಚೌಕಟ್ಟಿನೊಳಗೆ ಸದ್ದಿಲ್ಲದೇ ಹಳೆಯ ಮೌಲ್ಯಗಳು ಚಿಗುರೊಡೆಯುತ್ತಿರುವುದು ಯಾರಿಗೂ ಕಾಣುತ್ತಿಲ್ಲವೆಂದೇ ಹೇಳಬಹುದು. ಸರಿಯಾಗಿ ನೋಡಿದರೆ ಅದು ಬಹುಮಾಧ್ಯಮಗಳಲ್ಲಿ ಢಾಳಾಗಿ ಕಾಣಿಸುತ್ತದೆ. ನೋಡುವ ಕಣ್ಣು ಬೇಕಷ್ಟೆ. ಹಾಗೆ ನೋಡಿ, ನೋಡಿ ತಕರಾರು ತೆಗೆಯುವ ಮನಸ್ಸುಗಳು ಹೆಚ್ಚಾಗಬೇಕು. ಕೇವಲ ಒಂದು ಶೀರ್ಷಿಕೆಗೆ ಮಾತ್ರ ಸೀಮಿತವಾಗಬಾರದು. ಪ್ರತಿದಿನ ಬರುವ ಪುಕ್ಕಟೆ ಜ್ಯೋತಿಷ್ಯದ ಉಪದೇಶಗಳು, ಲೇಖನಗಳು ಎಲ್ಲವೂ ಚರ್ಚೆಗೊಳಪಡಬೇಕು. ಆಗ ನಿಜವಾಗಿ ವಾಚಕರ ಕೆಲಸ ಪೂರ್ಣಗೊಳ್ಳುತ್ತದೆ. ಅದು ಬಿಟ್ಟು ಇದು ಸಮಾಜವನ್ನು ಒಡೆಯುವ ಮತ್ತು ಹಿಂದೂಧರ್ಮವನ್ನು ಹೀಗಳೆಯಲೆಂದೇ ಪ್ರಕಟಗೊಳಿಸಿರುವ ಕಾರ್ಯತಂತ್ರ ಎಂದು ಬೊಬ್ಬೆ ಹೊಡೆಯುವುದರಲ್ಲಿ ಅರ್ಥವಿಲ್ಲ.

ಇನ್ನು ಶೀರ್ಷಿಕೆಯ ವಿಚಾರಕ್ಕೆ ಬಂದರೆ, ಪತಿಯ ಆಜ್ಞೆಯನ್ನು ಪತ್ನಿ ಪಾಲಿಸಬೇಕೆ? ಅಥವಾ ಪತ್ನಿಯ ಆಜ್ಞೆಯನ್ನು ಪತಿ ಪಾಲಿಸಬೇಕೆ ಎನ್ನುವುದು ದಂಪತಿಯ ಖಾಸಗಿ ವಿಚಾರ. ಇದು ಸಾಮಾಜಿಕವಾಗಿ ಪ್ರಶ್ನೆಗೊಳಗಾಗುವುದಾದರೆ, ಯಾರು ಯಾರ ಆಜ್ಞೆಯನ್ನೂ ಪಾಲಿಸಬೇಕಾಗಿಲ್ಲ. ಇದೇ ಧರ್ಮದ ಮಹಾಕಾವ್ಯ ಮಹಾಭಾರತವು ಜೀವನದ ಅತ್ಯುತ್ತಮ ಗೆಳೆಯ/ಗೆಳತಿ ಯಾರೆಂದರೆ ಸಂಗಾತಿಯೆನ್ನುತ್ತದೆ. ಈ ಪುರಾಣದಲ್ಲಿ ಬರುವ ಶಿವ-ಪಾರ್ವತಿಯರೇ ಸ್ವತಃ ಯಾರ ಆಜ್ಞೆಯನ್ನು ಯಾರೂ ಪಾಲಿಸುವವರಲ್ಲ. ಅವಳಿಗೇನು ಅನಿಸುತ್ತದೆಯೊ, ಬೇಕೊ ಅದನ್ನೇ ಶಿವೆ ಮಾಡುತ್ತಾಳೆ. ಶಿವ ತನಗೇನನ್ನಿಸುತ್ತೊ ಅದನ್ನೇ ಮಾಡುತ್ತಾನೆ ಮತ್ತು ಬದುಕುತ್ತಾನೆ. ಸ್ಮಶಾನವಾಸಿ ಶಿವ ವಿರಾಗಿ. ಸರ್ವಾಲಂಕಾರಭೂಶಿತೆ ಶಿವೆ ಅನುರಾಗಿ. ಒಬ್ಬರ ಅಸ್ತಿತ್ವವನ್ನು ಇನ್ನೊಬ್ಬರು ಅಧಿಗಮಿಸಲಾರದ ಸಾಂಗತ್ಯ ಅದು. ಇವರಿಬ್ಬರಿಗೆ ಸಂಬಂಧಿಸಿದ ಯಾವುದೇ ಪುರಾಣಗಳಲ್ಲಿ ಒಬ್ಬರನ್ನೊಬ್ಬರು ಬಿಟ್ಟುಕೊಡದೇ ಇರುವುದು, ತಮ್ಮ ಕರ್ತವ್ಯಗಳ ಪರಿಧಿಯಲ್ಲಿ ಸ್ವತಂತ್ರವಾಗಿ ನಿರ್ಧರಿಸುವುದು ಎಲ್ಲವನ್ನೂ ಕಾಣಬಹುದು. ಉದಾಹರಣೆಗೆ ಕಾಳಿಯ ರೂಪದಲ್ಲಿ ರಕ್ತಬೀಜನನ್ನು ಸಂಹರಿಸುವ ಸಂದರ್ಭವೇ ಇರಬಹುದು. ಇಂತಹ ದಾಂಪತ್ಯದಲ್ಲಿ ಆಜ್ಞೆ, ಅನುಸರಣೆಗಳಿಗೆ ಎಲ್ಲಿಯ ಮಹತ್ವ? ಏನಿದ್ದರೂ ಒಬ್ಬರನ್ನೊಬ್ಬರು ಪೂರಕವಾಗಿ ಬಿಟ್ಟುಕೊಡದ ಸ್ನೇಹವಷ್ಟೆ.

ವೃದ್ಧೆಯೊಬ್ಬಳು ಆಗಲೂ ಇದ್ದಳು ! ಈಗಲೂ ಇರುತ್ತಾಳೆ. ಮುಂದೆಯೂ ಇರಲಿದ್ದಾಳೆ. ಇವತ್ತಿಗೂ ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೊರಡುವಾಗ ನೀನು ಪತಿಯನ್ನು ಅನುಸರಿಸಿ ಹೆತ್ತವರಿಗೆ ಹೆಸರು ತಾ ಎನ್ನುವ ಅರ್ಥದ ಹಾಡುಗಳನ್ನು ಹೇಳಿಯೇ ದಿಬ್ಬಣವನ್ನು ಕಳಿಸಿಕೊಡಲಾಗುತ್ತದೆ. ಇದೊಂತರ ತನ್ನ ಅನುಭವವನ್ನು ಹಿರಿಯಳೊಬ್ಬಳು ಮುಂದಿನವರಿಗೆ ದಾಟಿಸಿದ ಹಾಗೆ. ಬುದ್ಧಿವಂತ ಹೆಂಡತಿ ಗಂಡನ ಎಲ್ಲಾ ಆಜ್ಞೆಗಳನ್ನು ಪಾಲಿಸಿದ ಹಾಗೆ ಅಭಿನಯಿಸುತ್ತ ತನಗೆ ಬೇಕಾದ ದಾಂಪತ್ಯವನ್ನು ಸಾಧಿಸುತ್ತಾಳೆ. ಇದನ್ನು ಗಂಡಿಗೆ ಹೇಳಿಕೊಡದ ಪರಿಣಾಮ ಇವತ್ತಿಗೂ ಅಹಮ್ಮಿನಲ್ಲಿ ಕೊಚ್ಚಿಹೋಗಿ ಒಂಟಿತನವನ್ನು ಅನುಭವಿಸುವ ಗಂಡಂದಿರನ್ನು ಕಾಣುತ್ತೇವೆ. ಆದಾಗ್ಯೂ ಹೆಂಡತಿ ಹೇಳಿದ್ದನ್ನು ಕೇಳುತ್ತ ಅಥವಾ ಕೇಳಿದ ಹಾಗೆ ಅಭಿನಯಿಸುತ್ತ ಸುಂದರ ದಾಂಪತ್ಯ ಸುಖವನ್ನು ಸಾಧಿಸಿಕೊಂಡ ಬುದ್ಧಿವಂತ ಗಂಡಸರೂ ಇದ್ದಾರೆ. ಇವೆಲ್ಲ ಮನೋವ್ಯಾಪಾರಗಳು ಹಿರಿಯಳಾಗಿ ವೃದ್ಧೆ ಪಾರ್ವತಿಗೆ ಹೇಳಿದ್ದರಲ್ಲಿ ಅನುಚಿತವೇನಿಲ್ಲ. ಆದರೆ ಲೇಖಕ ತನ್ನದೂ ಇರಲಿ ಎಂದು ಅಪತ್ಯ, ಅಸಂಗತ ಅಧಿಕಪ್ರಸಂಗಿತನ ತೋರಿರುವುದು ಮಾತ್ರ ಸಹ್ಯವೆನಿಸುವುದಿಲ್ಲ.

ಇಂತಹ ಲೇಖಕನ ಅಧಿಕಪ್ರಸಂಗಿತನವನ್ನು ನಾವು ಬಹಳಷ್ಟು ಗ್ರಂಥಗಳಲ್ಲಿ ಕಾಣಬಹುದು. ಉದಾಹರಣೆಗೆ ಗೀತಾಪ್ರೆಸ್ ನಿಂದ ಪ್ರಕಟವಾಗಿರುವ ವಾಲ್ಮೀಕಿ ರಾಮಾಯಣದಲ್ಲಿ ರಾಮನು ರಾವಣನನ್ನು ವಧಿಸಿ ಸೀತೆಯನ್ನು ಅಯೋಧ್ಯೆಗೆ ಕರೆದೊಯ್ಯಬೇಕು. ಆ ಸಂದರ್ಭದಲ್ಲಿ ಸೀತೆ ಕೇಳುತ್ತಾಳೆ. ನೀನು ನನಗಾಗಿ ಈ ಯುದ್ಧ ಮಾಡಿದೆಯೋ? ಇಲ್ಲ, ನಾನು ಜನರಿಗಾಗಿ ಯುದ್ಧ ಮಾಡಿದೆ. ನೀನೀಗ ನಾಯಿ ಮುಟ್ಟಿದ ತುಪ್ಪದ ಮಡಿಕೆ, ನನಗೆ ನಿನ್ನ ಮೇಲೆ ಯಾವುದೇ ಆಸಕ್ತಿ ಇಲ್ಲ! ಅದೇ ತುಳಸಿ ರಾಮಾಯಣದಲ್ಲಿ ಈ ಸಂದರ್ಭವನ್ನು ಕೈಬಿಡಲಾಗಿದೆ. ಹಿಂದಿಯ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾದ ಸಿಯಾ ಕಾ ರಾಮ್ ನಲ್ಲಿ ಈ ಸಂದರ್ಭವನ್ನು ರಾಮನೊಳಗಿನ ರಾಜನೊಬ್ಬ ಅವನ ಪ್ರಜ್ಞೆಯನ್ನು ಪ್ರಶ್ನೆ ಮಾಡುವ, ಆ ಮೂಲಕ ರಾಮನೊಳಗಿನ ಒಬ್ಬ ಪ್ರೇಮಿ ಮತ್ತು ಮನುಷ್ಯ ತಲ್ಲಣಗೊಳ್ಳುವ ಹಾಗೆ ಚಿತ್ರಿಸಲಾಗಿದೆ. ಇನ್ನು ಶಂಭೂಕನನ್ನು ಹಿಂದೆ ಮುಂದೆ ನೋಡದೆ ಕೊಲ್ಲುವ ಕಟುಕ ರಾಮನನ್ನು ವಾಲ್ಮೀಕಿ ಚಿತ್ರಿಸಿದ್ದರೆ, ತುಳಸೀದಾಸರು ರಾಮನ ಪ್ರಜ್ಞೆಯನ್ನು ಪ್ರಶ್ನಿಸಿಕೊಳ್ಳುತ್ತ ಶಂಭೂಕನನ್ನು ಕೊಲ್ಲುವುದನ್ನು ಕಟ್ಟಿಕೊಡುತ್ತಾರೆ.

ಹೀಗೆ ಲೇಖಕನ ಮನೋಧರ್ಮವೇ ಅದನ್ನು ನಿರೂಪಿಸುತ್ತಿರುವ ನಿರೂಪಕನ ಧೋರಣೆ ಎಂತಲೂ, ಆ ಲೇಖಕನ ಅಭಿಪ್ರಾಯವೇ ಆ ಮಾಧ್ಯಮದ ಅಭಿಪ್ರಾಯ ಎಂತಲೂ ವಾಚಕರು ಪರಿಗಣಿಸಬಾರದು. ಇದರ ಬಗ್ಗೆ ಚಿಂತನೆ ಬೇಕು, ಆದರೆ ಆ ಚಿಂತನೆಗೆ ಹಚ್ಚಿದ ಮಾಧ್ಯಮದ ಮೇಲೆ ವೃಥಾ ದೋಷಾರೋಪಣೆ ಸ್ವತಃ ಲೇಖಕರಾದ ಆಕ್ಷೇಪ ತೆಗೆದ ಯಾರಿಗೂ ಶೋಭೆ ತರುವುದಿಲ್ಲ.


ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಯಾರಿಗಾದರೂ ನೆನಪಿದೆಯೆ?

ಭ್ರಷ್ಟಾಚಾರ ಎನ್ನುವುದು ವ್ಯವಸ್ಥೆಯಲ್ಲಲ್ಲ, ಮನಸ್ಸಿನಲ್ಲಿ ಇರುತ್ತದೆ. ವ್ಯವಸ್ಥೆ ಮನಸ್ಸಿನ ಕನ್ನಡಿ ಮಾತ್ರ. ಮನುಷ್ಯನಿಗೆ ಅಧಿಕಾರ ಸಿಗುವುದು ಅರ್ಹತೆ, ಯೋಗ್ಯತೆ ಮತ್ತು ...