ಭ್ರಷ್ಟಾಚಾರ ಎನ್ನುವುದು ವ್ಯವಸ್ಥೆಯಲ್ಲಲ್ಲ, ಮನಸ್ಸಿನಲ್ಲಿ ಇರುತ್ತದೆ. ವ್ಯವಸ್ಥೆ ಮನಸ್ಸಿನ ಕನ್ನಡಿ ಮಾತ್ರ. ಮನುಷ್ಯನಿಗೆ ಅಧಿಕಾರ ಸಿಗುವುದು ಅರ್ಹತೆ, ಯೋಗ್ಯತೆ ಮತ್ತು ಅವಕಾಶವಿದ್ದಾಗ. ಕೆಲವೊಮ್ಮೆ ಯಾವುದೂ ಇಲ್ಲದಿದ್ದಾಗಲೂ ಅವಕಾಶ ಸೃಷ್ಟಿಸಿಕೊಳ್ಳಲಾಗುತ್ತದೆ ಭ್ರಷ್ಟಾಚಾರದ ಮೂಲಕ. ಅದು ವ್ಯವಸ್ಥೆಯ ಜೊತೆಗೆ ವ್ಯವಸ್ಥೆಯಲ್ಲಿನ ಆತ್ಮಸಾಕ್ಷಿಯನ್ನೂ ಕೊಲ್ಲುತ್ತದೆ. ಅಸಮಾನತೆ, ಅರಾಜಕತೆ ಮತ್ತು ವ್ಯವಸ್ಥೆಯ ನಾಶಕ್ಕೆ ಕಾರಣವಾಗುತ್ತದೆ. ಯಾವುದೇ ಬಗೆಯ ಅಧಿಕಾರ ಮನುಷ್ಯನ ಅಸಲಿ ಮುಖವನ್ನು ತೋರಿಸುತ್ತದೆ. ಅಂತಹ ಅಸಲಿ ಮುಖಗಳಲ್ಲೊಂದು ಭ್ರಷ್ಟಾಚಾರ. ಭ್ರಷ್ಟಾಚಾರದಲ್ಲಿ ಹಲವು ಬಗೆ. ಮೋಸ, ಸುಳ್ಳು, ವಂಚನೆ, ಹೆದರಿಸುವಿಕೆ, ಬೇಡಿಕೆ ಇಡುವಿಕೆ, ಪ್ರಲೋಭನೆ, ಒತ್ತಡ ತರುವುದು ಇತ್ಯಾದಿ ರೂಪದಲ್ಲಿ ಅದು ಕಾಣಿಸುತ್ತದೆ.
ಯಾವುದೇ
ವ್ಯವಸ್ಥೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸಂಪರ್ಕ ಅಥವಾ ಸಂಪನ್ಮೂಲದ ಬಲದಿಂದ ತನಗೆ ಬೇಕಾದುದನ್ನು ತೆಗೆದುಕೊಳ್ಳಲು
ಸಾಧ್ಯವಾಗುವುದಾದರೆ ಆ ವ್ಯವಸ್ಥೆಯಲ್ಲಿ ಸಮಾನತೆ ಇಲ್ಲವೆಂತಲೇ ಅರ್ಥ. ಇಂತಹ ಅಸಮಾನತೆ ಸೃಷ್ಟಿಸುವ
ಯಾವುದೇ ವ್ಯವಸ್ಥೆ ನ್ಯಾಯಯುತ ಬದುಕಿಗೆ ಅಪಾಯವೆ. ಎಲ್ಲಿ ನ್ಯಾಯಯುತ ಬದುಕು ಸಾಧ್ಯವಿಲ್ಲವೊ ಅಲ್ಲಿ
ಜನತಂತ್ರ ಸಹ ಸಂಕಷ್ಟದಲ್ಲಿರುತ್ತದೆ. ಈ ಸಂಕಷ್ಟಕ್ಕೆ ಉತ್ತರ ಕಂಡುಕೊಳ್ಳುವಲ್ಲಿ ಚಾಣಕ್ಯನಂತಹ ರಾಜನೀತಿಜ್ಞನೂ
ಸಹ ಹೆಣಗಾಡಿದ್ದಕ್ಕೆ ಚರಿತ್ರೆ ಸಾಕ್ಷಿಯಾಗಿದೆ. ಪ್ರಸ್ತುತ ಆಧುನಿಕ ರಾಜಕಾರಣದಿಂದ ಶೈಕ್ಷಣಿಕ ಕ್ಷೇತ್ರದವರೆಗೆ
ಈ ಹೆಣಗಾಟ ದೊಡ್ಡ ಮಟ್ಟದಲ್ಲಿ ವ್ಯಾಪಿಸಿದೆ.
ಶಾಲೆಯಲ್ಲಿ ಮಕ್ಕಳಿಗೊಂದು ಹುದ್ದೆ ಕೊಟ್ಟು ನೋಡಿ. ಆ ತರಗತಿಯ ನಾಯಕ/ನಾಯಕಿಯನ್ನು
ಉಳಿದ ಮಕ್ಕಳು ಹೇಗೆಲ್ಲ ನಿಯಂತ್ರಿಸುವ ಮತ್ತು ಬೇರೆ ಬೇರೆ ರೀತಿಯಲ್ಲಿ ತಮ್ಮ ಹಿತಾಸಕ್ತಿಯನ್ನು ಈಡೇರಿಸುವ
ಹಾಗೆ ಮಾಡುತ್ತಾರೆ ಎಂದು. ಅದೇ ರೀತಿ ಅಧಿಕಾರ ಸಿಕ್ಕಿರುವ ಆ ನಾಯಕ/ನಾಯಕಿಯ ವರ್ತನೆಯನ್ನು ಗಮನಿಸಿ
ನೋಡಿ. ಹೀಗೆ ಶಾಲಾ ಹಂತದಲ್ಲಿಯೇ ಅಧಿಕಾರ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ರೂಪದ ಭ್ರಷ್ಟಾಚಾರದ
ಮನಸ್ಥಿತಿ ಬೆಳೆಯುತ್ತದೆ ಎಂದು ಸಾಮಾಜಿಕ ಅಧ್ಯಯನಗಳು ಹೇಳುತ್ತವೆ.
ಇವತ್ತು ಮಾನವೀಯ ಮೌಲ್ಯಗಳು ಮನೆಗಳಲ್ಲೇ ಕುಸಿದು
ಹೋಗಿರುವಾಗ ಭ್ರಷ್ಟಾಚಾರದ ಬೆಳವಣಿಗೆಯ ದರವೂ ಹೆಚ್ಚಾಗಿದೆ. ಇದು ಕೇವಲ ಭಾರತದಲ್ಲಷ್ಟೇ ಅಲ್ಲ ವಿಶ್ವದ
ಎಲ್ಲೆಡೆ ಜನತಂತ್ರಕ್ಕೆ ಮಾರಕವಾಗುತ್ತಿರುವುದನ್ನು ಮನಗಂಡು ಕಳವಳಗೊಂಡ ವಿಶ್ವಸಂಸ್ಥೆಯ ಸಾಮಾನ್ಯ ಸಭೆ
2003ರ ಅಕ್ಟೋಬರ್ 31ರಂದು ಭ್ರಷ್ಟಾಚಾರ ವಿರೋಧಕ್ಕೆಂದೇ ಒಂದು ದಿನವನ್ನು ಮೀಸಲಿಟ್ಟಿತು. ಅದೇ ಡಿಸೆಂಬರ್
9. ಇಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ.
ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ನಮ್ಮ ವಿರೋಧಪಕ್ಷಗಳು
ಮರೆತೇ ಬಿಟ್ಟಿವೆ. ಮಾಧ್ಯಮಗಳಿಗೂ ನೆನಪಿದ್ದ ಹಾಗಿಲ್ಲ. ಎಲ್ಲರೂ ಇನ್ನೂ ನಿನ್ನೆ ಹೊರಬಂದ ರಾಜ್ಯಗಳ
ಚುನಾವಣಾ ಫಲಿತಾಂಶದ ಗುಂಗಿನಲ್ಲೇ ಇದ್ದಾರೆ. ಆದರೆ ನಾವು ನಾಗರಿಕರು ಮರೆಯುವ ಹಾಗಿಲ್ಲ. ಪ್ರತಿದಿನವನ್ನೂ
ಭ್ರಷ್ಟಾಚಾರ ವಿರೋಧಿ ದಿನವನ್ನಾಗಿ ಆಚರಿಸುವ ಬದ್ಧತೆಯನ್ನು ತೋರಿಸಬೇಕಾಗಿದೆ.
ಕರ್ನಾಟಕಕ್ಕೆ ಬಂದರೆ , ಜನರು ಅದಾಗಲೇ 10% ಭ್ರಷ್ಟಾಚಾರದ ಆರೋಪ ಹೊಂದಿದ
ಕಾಂಗ್ರೆಸ್ ಸರಕಾರವನ್ನು ಮನೆಗೆ ಕಳಿಸಿ ಸಮ್ಮಿಶ್ರ ಸರಕಾರವನ್ನು ಆರಿಸಿ ಕಳಿಸಿದ್ದರು.. ಆದರೆ ಆ ಸರಕಾರವೂ
ಭ್ರಷ್ಟಾಚಾರದ ಮತ್ತೊಂದು ರೂಪವಾದ ಆಪರೇಷನ್ ಕಮಲಕ್ಕೆ ಒಳಗಾಗಿ ಬಿದ್ದು ಹೋಯಿತು. ಈಗ 40% ಭ್ರಷ್ಟಾಚಾರದ
ಆರೋಪ ಹೊಂದಿರುವ ಸರಕಾರವನ್ನೇ ಒಪ್ಪಿಕೊಂಡು, ಜೀ ಹುಜೂರ್ ಎನ್ನುತ್ತ ಅದರ ಗುಪ್ತ ಕಾರ್ಯಾಚರಣೆಗಳಿಗೆ,
ಸಮಾಜ ಒಡೆಯುವ ತಂತ್ರಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಕುಮ್ಮಕ್ಕು ಕೊಡುತ್ತಿದ್ದಾರೆ. ಇಲ್ಲಿ ಜನತಂತ್ರದ
ಮೌಲ್ಯಗಳಿಗಿಂತಲೂ ಧರ್ಮ ಮತ್ತು ರಾಜಕಾರಣವೇ ಜನಮಾನಸದಲ್ಲಿ ಗೆಲ್ಲುತ್ತಿರುವುದು ಭವಿಷ್ಯದ ದೃಷ್ಟಿಯಿಂದ
ಒಳ್ಳೆಯ ಲಕ್ಷಣವಲ್ಲ. ಒಂದೆಡೆ ಆರ್ಥಿಕತೆ ಕುಸಿಯುತ್ತಿದೆ. ನಿರುದ್ಯೋಗ ಹೆಚ್ಚಳವಾಗಿ ಜನರು ಕೆಲಸದ
ಆಮಿಷಕ್ಕೆ ಒಳಗಾಗಿ ಕೈಯಲ್ಲಿರುವ ದುಡ್ಡನ್ನೆಲ್ಲ ಕಳೆದುಕೊಳ್ಳುತ್ತಿರುವ ಸುದ್ದಿ ಹೆಚ್ಚಾಗುತ್ತಿದೆ.
ಸಮಾಜದ ಕೆಳವರ್ಗದ ಮಹಿಳೆಯರು ದಿಕ್ಕುಗಾಣದೆ ಬೀದಿಗೆ ಬಿದ್ದಿದ್ದಾರೆ. ಕಾರ್ಮಿಕ ಸಂಘಟನೆಗಳು, ಗುತ್ತಿಗೆದಾರರು
ಹಿಡಿಶಾಪ ಹಾಕಿಕೊಂಡು ಓಡಾಡುತ್ತಿದ್ದಾರೆ. ಆದರೂ ಜನರು ಧರ್ಮರಾಜಕಾರಣದಿಂದ ಹೊರಬರದೆ ಸಮೂಹಸನ್ನಿಗೆ
ಒಳಗಾದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ನಂಬುವುದು ಮತ್ತು ಹರಡುವುದನ್ನು ಮುಂದುವರಿಸಿದ್ದಾರೆ.
ಇದು ಯಾವ ಹಂತಕ್ಕೆ ಹೋಗುತ್ತದೆ ಎಂದು ಸಮಾಜ ವಿಜ್ಞಾನ ತಜ್ಞರು, ಆರ್ಥಿಕ ತಜ್ಞರು, ವಿಚಾರವಂತರೆಲ್ಲ
ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇವತ್ತಾದರೂ ಜನರು ಭ್ರಷ್ಟಾಚಾರವನ್ನು ವಿರೋಧಿಸುವ ಮನಸ್ಸು ಮಾಡದಿದ್ದರೆ
ಭವಿಷ್ಯದಲ್ಲಿ ಮಕ್ಕಳೂ ಅದನ್ನು ಕಲಿಯುತ್ತಾರೆ. 40% ನ್ನು ಒಪ್ಪಿಕೊಂಡಿರುವ ಜನರು ನಾಳೆ 100% ಆದರೂ
ನಮ್ಮವರು, ನಮ್ಮ ಮಂದಿ ಎನ್ನುವ ಧೃವೀಕರಣಕ್ಕೆ ಬಲಿಯಾಗಬಹುದು. ಒಂದು ವ್ಯವಸ್ಥೆ ಪ್ರಬಲವಾದಷ್ಟೂ ಭಯಗ್ರಸ್ತರು
ಹೆಚ್ಚಾಗುತ್ತಾರೆ. ಈಗಾಗಲೇ ಅದರ ಝಲಕ್ ನಾವು ಕಾಣುತ್ತೇವೆ. ಭ್ರಷ್ಟಾಚಾರದ ಮನಸ್ಥಿತಿಯುಳ್ಳ ಜನರಿಗೆ
ಹಣ ಮತ್ತು ಅಧಿಕಾರದ ಜೊತೆಗೆ ಸನ್ನಿಗೊಳಗಾದ ಜನಬಲವೂ ಸೇರಿಬಿಟ್ಟರೆ ಸರ್ವನಾಶಕ್ಕೆ ಮತ್ತೊಂದು ದಾರಿ
ಬೇಕಿರುವುದಿಲ್ಲ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಲೇ ಬೇಕಾದ ಅನಿವಾರ್ಯ ಸಂದರ್ಭ ಇದಾಗಿದೆ.













