ಪ್ರೇಕ್ಷಕ ವರ್ಗವು ಸಿನೆಮಾಗಿಂತಲೂ ಮಿಗಿಲಾದ ನಾಟಕಗಳನ್ನು ಅರ್ಥಮಾಡಿಕೊಂಡು ವಿವೇಚಿಸುತ್ತದೆಯೆ?

 ಕಾಶ್ಮೀರ್ ಪೈಲ್ಸ್ ಚಲನಚಿತ್ರವು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯಂತ ಕೆಟ್ಟಚಿತ್ರ ಮತ್ತು ಪ್ರಚಾರದ ಗಿಮಿಕ್ ಎಂದು ಹೀಗಳೆಯಲ್ಪಟ್ಟಿದೆ. ಯಥಾಪ್ರಕಾರ ಸಮಾಜದ ಒಂದು ಬಣ ನಿರ್ಣಾಯಕರಲ್ಲಿ ಒಬ್ಬ ತನ್ನದೇ ದೇಶದ ಮಾನ ತೆಗೆಯಲು ಹಿಂದು ಮುಂದು ನೋಡದ ವ್ಯಕ್ತಿ. ಆ ವ್ಯಕ್ತಿಯ ಮಾತನ್ನು ಯಾಕೆ ಅಷ್ಟು ಮಹತ್ವದ್ದಾಗಬೇಕು. ಅದೊಂದು ಉತ್ತಮ ಚಿತ್ರವಾಗಿರದಿದ್ದರೆ ಜನರು ಅದನ್ನು ಗೆಲ್ಲಿಸುತ್ತಿದ್ದರೆ? ಎಂದು ಪ್ರತಿಪಾದಿಸುತ್ತಿದ್ದಾರೆ. ಇನ್ನೊಂದು ಬಣ ಭಾರತದಲ್ಲಿ ನಡೆಯುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಿರ್ಣಾಯಕರನ್ನು ವಿದೇಶಗಳಿಂದ ಆಮಂತ್ರಿಸಲಾಗುತ್ತದೆ. ಖುದ್ದು ಸರ್ಕಾರವೇ ಇವರನ್ನು ನಿಯುಕ್ತಿಗೊಳಿಸುತ್ತದೆ. ಅವರಲ್ಲಿ ಯಾರೊಬ್ಬರು ಇಂತಹ ಚಕಾರಗಳನ್ನೆತ್ತಿದರೆ ತಪ್ಪೇನು? ಸತ್ಯವನ್ನು ಸತ್ಯವೆಂದು ಹೇಳಿದರೆ ಯಾಕೆ ಅಲ್ಲಗಳೆಯಬೇಕು? ಬೊಬ್ಬೆಹೊಡೆಯಬೇಕು? ಈ ಚಲನಚಿತ್ರವೊಂದು ಪಕ್ಷವೊಂದರ ಪ್ರಾಪಗೆಂಡ ಎನ್ನುವುದು ಸಾಬೀತಾಗಿದೆ. ಖುದ್ದು ಪ್ರಧಾನಮಂತ್ರಿಗಳೇ ಈ ಚಲನಚಿತ್ರದ ಮನರಂಜನಾ ತೆರಿಗೆಯನ್ನು ರದ್ದುಗೊಳಿಸಲು ಸೂಚಿಸಿದ್ದಾರೆ. ಒಂದು ಸಿನೆಮಾ ಕಲೆಯ ನೆಲೆಯಲ್ಲಿದ್ದರೆ ಅದು ಸಿನೆಮಾ. ಕಲೆಯ ಹೊರತಾಗಿ ರಾಜಕೀಯ ಉದ್ದೇಶವನ್ನೊಳಗೊಂಡರೆ ಅದು ಪ್ರಾಪಗಂಡವಲ್ಲದೆ ಇನ್ನೇನು? ಸಿಂಗಾಪುರದಲ್ಲಿ ಈ ಸಿನೆಮಾ ಎರಡು ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಪ್ರದರ್ಶನಕ್ಕೆ ಅನುಮತಿ ನೀಡಲಿಲ್ಲ. ಹರಿಯಾಣದಲ್ಲೂ ಈ ಸಿನೆಮಾಕ್ಕೆ ತೆರಿಗೆ ರದ್ದು ಮಾಡಲು ಸರ್ಕಾರ ಒಪ್ಪಲಿಲ್ಲ. ಕೋಮುಸಂಘರ್ಷದಲ್ಲಿ ಒಂದು ಸಮುದಾಯಕ್ಕೆ ಆದ ದೌರ್ಜನ್ಯ, ನೋವುಗಳು ಮತ್ತೊಂದು ಸಮುದಾಯದ ದೌರ್ಜನ್ಯ, ನೋವನ್ನು ಮುಚ್ಚಿಬಿಡುವುದಿಲ್ಲ. ಇಂತಹ ಸತ್ಯ ಮುಚ್ಚಿಡುವ, ಸತ್ಯದ ಹೆಸರಿನಲ್ಲಿ ಅರ್ಧ ಸುಳ್ಳಿನ ಸರಮಾಲೆಗಳನ್ನು ಸಮಾಜದಲ್ಲಿ ಪಸರಿಸಿ ಕಂದಕಗಳನ್ನು ದೊಡ್ಡ ಮಾಡುವುದು ರಾಜಕೀಯ ಹುನ್ನಾರವಲ್ಲದೆ ಇನ್ನೇನು? ಎಂದು ಕೇಳುತ್ತಿದೆ.

ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪರವಿರೋಧದ ಹೇಳಿಕೆಗಳು ಭರ್ತಿಯಾಗಿವೆ. ಕಾಶ್ಮೀರ ಫೈಲ್ಸ್ ಚಲನಚಿತ್ರದ ಮೊದಲ ದೃಶ್ಯವೇ ಇದೊಂದು ಪ್ರಾಪಗೆಂಡ ಎನ್ನುವುದನ್ನು ಪ್ರಮಾಣೀಕರಿಸುತ್ತದೆ. ಕೇವಲ ಅರ್ಧಗಂಟೆಯ ಚಿತ್ರ ನೋಡುವಷ್ಟರಲ್ಲಿ ಇದೊಂದು ದ್ವೇಷ ಬಿತ್ತುವ, ಒಂದು ಸಮುದಾಯವನ್ನು ಸಂಪೂರ್ಣವಾಗಿ ಖಳನಾಯಕನನ್ನಾಗಿಸುವ ದೊಡ್ಡ ಕ್ಯಾನ್ವಾಸಿನಲ್ಲಿ ಬರೆದ ಕ್ರೌರ್ಯದ ಚಿತ್ರಣವೆಂದಷ್ಟೇ ಅನಿಸುತ್ತದೆ. ಆ ನಂತರ ನಡೆಯುವ ಯಾವುದೇ ಭಾಷಣ, ಅತ್ಯಾಚಾರ, ಜೀವನ್ಮರಣದ ಹೋರಾಟಗಳೆಲ್ಲ ನೋಡುಗನಲ್ಲಿ ಉಸಿರುಗಟ್ಟಿಸುತ್ತದೆ. ಇದಕ್ಕೆ ಸತ್ಯದ ಸರ್ಟಿಫಿಕೇಟು ಕೊಡುವುದಾದರೆ ಇದು ಸಾಕ್ಷ್ಯಚಿತ್ರವೇ? ಅಲ್ಲ, ಒಂದು ಸಿನೆಮಾ. ಸಿನೇಮಾ ಎಂಬುದು ಬರಹವಿದ್ದಂತೆ. ಲೇಖಕನ ಮನಸ್ಥಿತಿಯ ಕನ್ನಡಿಯಂತೆ. ನಿರ್ದೇಶಕ, ನಿರ್ಮಾಪಕರ ಮನಸ್ಸಿನ ಕನ್ನಡಿಯಷ್ಟೆ. ಈ ಕನ್ನಡಿಯನ್ನೇ ಇಡೀ ಕಾಶ್ಮೀರಿ ಪಂಡಿತರ ಕನ್ನಡಿಯೂ ಹೌದು ಎನ್ನುವ ಹಾಗೆ ಬಿಂಬಿಸಿದ್ದು ರಾಜಕೀಯದ ಢಾಳ ಲೇಪನ ಈ ಚಿತ್ರಕ್ಕಿದೆಯೆಂಬುದನ್ನು ಪುಷ್ಟೀಕರಿಸುತ್ತದೆ. ಆದಾಗ್ಯೂ ಭಾರತೀಯ ಬಹುಸಂಖ್ಯಾತ ವರ್ಗವು ಇದೊಂದು ಹಸಿ ಸತ್ಯವೆಂದು ಬಾಯಿಂದ ಬಾಯಿಗೆ ಹರಡಿ ಕಣ್ಣುಬಿಟ್ಟುಕೊಂಡು ಪೂರ್ತಿ 2-50ಗಂಟೆಗಳ ಕಾಲ ನೋಡಿದೆಯೆಂದರೆ ನಮ್ಮ ಸಮಾಜದಲ್ಲಿ ಜನರ ಹೃದಯ ಮತ್ತು ಸ್ಪಂದನೆಗಳು ಯಾವ ರೀತಿ ನ್ಯಾಯ, ಅನ್ಯಾಯ ಮತ್ತು ಸತ್ಯ,ಅಸತ್ಯಗಳ ನಡುವಿನ ಅಂತರವನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿವೆ ಎನ್ನುವುದನ್ನು ತೋರಿಸುತ್ತದೆ. ಒಳಗಣ್ಣು ಮುಚ್ಚಿದ ಇಂತಹ ಬಹುಸಂಖ್ಯಾತ ಪ್ರೇಕ್ಷಕ ವರ್ಗವು ಸಮಾಜದಲ್ಲಿ ನಡೆಯುತ್ತಿರುವ ಸಿನೆಮಾಗಿಂತಲೂ ಮಿಗಿಲಾದ ನಾಟಕಗಳನ್ನು ಅರ್ಥಮಾಡಿಕೊಂಡು ವಿವೇಚಿಸುತ್ತದೆ ಎಂದು ನಂಬುವುದಾದರೂ ಹೇಗೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಯಾರಿಗಾದರೂ ನೆನಪಿದೆಯೆ?

ಭ್ರಷ್ಟಾಚಾರ ಎನ್ನುವುದು ವ್ಯವಸ್ಥೆಯಲ್ಲಲ್ಲ, ಮನಸ್ಸಿನಲ್ಲಿ ಇರುತ್ತದೆ. ವ್ಯವಸ್ಥೆ ಮನಸ್ಸಿನ ಕನ್ನಡಿ ಮಾತ್ರ. ಮನುಷ್ಯನಿಗೆ ಅಧಿಕಾರ ಸಿಗುವುದು ಅರ್ಹತೆ, ಯೋಗ್ಯತೆ ಮತ್ತು ...