ಶಾಲೆಗಳಲ್ಲಿ ಭಗವದ್ಗೀತೆ – ಬೇಕೊ? ಬೇಡವೊ?

ಶಾಲೆಗಳಲ್ಲಿ ಭಗವದ್ಗೀತೆ ಬೇಕೊ? ಬೇಡವೊ ಎನ್ನುವುದರಲ್ಲಿ ಮೂರು ವಿಚಾರಗಳಿವೆ. ಒಂದು ಇವತ್ತಿನ ಶಾಲೆಗಳು, ಮಕ್ಕಳು ಹೇಗಿದ್ದಾರೆ? ಭಗವದ್ಗೀತೆ ಮತ್ತು ಬೇಕು, ಬೇಡಗಳ ಪ್ರಶ್ನೆ. ಇದೆಲ್ಲವನ್ನೂ ಮೀರಿ ಈ ವಿಚಾರದ ಪ್ರಸ್ತುತತೆ. ಇವುಗಳ ಬಗ್ಗೆ ಒಂದೊಂದಾಗಿ ನೋಡೋಣ.

ಶಾಲೆ ಮತ್ತು ಮಕ್ಕಳು – ಇವತ್ತಿನ ಶಾಲೆ ಒಂದು ಕಾರ್ಖಾನೆ. ಇಲ್ಲಿ ಮಕ್ಕಳನ್ನು ಒಂದು ವಸ್ತುವನ್ನಾಗಿ ನೋಡಲಾಗುತ್ತದೆ. ಮಕ್ಕಳು ಇಲ್ಲಿ ಭವಿಷ್ಯದ ಉದ್ಯೋಗಕ್ಕಾಗಿ ಓದಲು ಬರುತ್ತಾರೆಯೇ ಹೊರತು ವ್ಯಕ್ತಿತ್ವ ವಿಕಸನಕ್ಕಲ್ಲ. ಇದು ಹೇಗೆ ನಿರೂಪಿತವಾಗುತ್ತದೆಯೆಂದರೆ ಕರ್ನಾಟಕದ ಸಾವಿರಾರು ಶಾಲೆಗಳು ಆಟದ ತರಗತಿಯನ್ನು ತರಗತಿಯ ವೇಳಾಪಟ್ಟಿಯಲ್ಲಿ ಸೇರಿಸಿವೆ. ಆದರೆ ಬಹುತೇಕ ಶಾಲೆಗಳು ಆಟದ ತರಗತಿಯಲ್ಲೂ ಸಹ ಮಕ್ಕಳಿಗೆ ಆಟಕ್ಕೆ ಬಿಡುವುದಿಲ್ಲ. ವಾಚನಾಲಯ ಇರುತ್ತದೆ. ಆದರೆ ಲೈಬ್ರರಿ ಪಿರಿಯಡ್ ನಲ್ಲಿ ಎಷ್ಟು ಮಕ್ಕಳು ವಾಚನಾಲಯಕ್ಕೆ ಹೋಗಿ ಓದುತ್ತಾರೆ? ಸ್ಪರ್ಧೆಗಳಿರುತ್ತವೆ. ಸ್ಪರ್ಧೆಗಳಲ್ಲಿ ಕೆಲವರು ಯಾವಾಗಲೂ ಭಾಗವಹಿಸುತ್ತಾರೆ. ಅವರಲ್ಲಿ ಕೆಲವರು ಪ್ರತಿಭಾವಂತರಾಗಿರಲಿ, ಬಿಡಲಿ ಬಹುಮಾನ ಪಡೆದೇ ಪಡೆಯುತ್ತಾರೆ. ಹೀಗೆ ಹೆಸರಿಗೆ ಮಾತ್ರ ವ್ಯಕ್ತಿತ್ವ ವಿಕಸನಕ್ಕಾಗಿ ಶಾಲೆ ಎನ್ನುವ ಹಾಗಾಗಿದೆ. ಒಂದು ಕಾಲದಲ್ಲಿ ಶಾಲೆಯ ಆವರಣವನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸುವ, ಕೈತೋಟಗಳನ್ನು ಮಾಡುವ, ಮಕ್ಕಳೇ ಬೆಳೆಸಿದ ಹಣ್ಣು, ತರಕಾರಿಗಳನ್ನು ಅವರೇ ತಿನ್ನುವಂತೆ ಮಾಡುವ ಶಾಲೆಗಳು ಯಥೇಚ್ಛವಾಗಿದ್ದವು. ಆದರೆ ಈಗ ಅವುಗಳು ಅಲ್ಲೊ ಇಲ್ಲೊ ಇದ್ದರೆ ಅದೊಂದು ವಿಶೇಷ ಸುದ್ದಿ. ಆದ್ದರಿಂದ ಮಕ್ಕಳು ಮನೆಯಲ್ಲಷ್ಟೇ ಅಲ್ಲ ಶಾಲೆಯಲ್ಲಿ ಸಹ ಬದುಕಿನ ಯಾವ ಪಾಠವನ್ನೂ ಕಲಿಯುತ್ತಿಲ್ಲ.

ಭಗವದ್ಗೀತೆ – ಇದು ಎಡಪಂಥೀಯರ ಕಣ್ಣಲ್ಲಿ ಮನುವಾದಿ ಗ್ರಂಥವಾಗಿಯೂ ಬಲಪಂಥೀಯರಲ್ಲಿ ಗೌರವಾನ್ವಿತ ಧಾರ್ಮಿಕಗ್ರಂಥವಾಗಿಯೂ ಪರಿಗಣಿಸಲ್ಪಟ್ಟಿದೆ. 14ನೆಯ ವಯಸ್ಸಿನಿಂದ – 18 ವರ್ಷವಯಸ್ಸಿನವರೆಗೆ ಪ್ರತಿದಿನ ಭಗವದ್ಗೀತೆಯನ್ನು ಓದಿ ಅದರ ಪ್ರತಿ ಶ್ಲೋಕವನ್ನು ತಲೆಗೆ ತೆಗೆದುಕೊಂಡು ಮುಂದಿನ 22 ವರ್ಷಗಳ ಕಾಲ ಅವುಗಳನ್ನು ಜೀವನದಲ್ಲಿ ಪ್ರಯೋಗಿಸಿ, ಅಧ್ಯಯನ ನಡೆಸಿ ಈ ಲೇಖನವನ್ನು ಬರೆಯುತ್ತಿದ್ದೇನೆ. ಆದ್ದರಿಂದ ಇದು ಧಾರ್ಮಿಕ ಗ್ರಂಥವಲ್ಲ, ಮನುವಾದಿ ಗ್ರಂಥವೂ ಅಲ್ಲ. ಇದು ಜಗತ್ತಿನ ಅತ್ಯಂತ ಶ್ರೇಷ್ಠವಾದ ವ್ಯಕ್ತಿತ್ವ ವಿಕಸನದ ಗ್ರಂಥ, ಮನಶಾಸ್ತ್ರೀಯ, ತತ್ತ್ವಶಾಸ್ತ್ರೀಯ ಮತ್ತು ಸಮಾಜ ವಿಜ್ಞಾನದ ಗ್ರಂಥವೆಂದು ನಾನು ಭಾವಿಸುತ್ತೇನೆ.

ಭಗವದ್ಗೀತೆಯಲ್ಲಿ ಬರುವ ಶ್ರೇಣೀಕೃತ ವ್ಯವಸ್ಥೆಯ ಬಗ್ಗೆ ವಿಚಾರವಾದಿಗಳ ಆಕ್ಷೇಪವಿದೆ. ಅದು ತಪ್ಪಲ್ಲ. ಯಾಕೆಂದರೆ ಭಗವದ್ಗೀತೆಯನ್ನು ಆಳವಾಗಿ ಅಧ್ಯಯನ ಮಾಡಿದವರು ಅವರ ಆಕ್ಷೇಪಕ್ಕೆ ಸಮರ್ಪಕವಾದ ಉತ್ತರ ಕೊಡುವುದರಲ್ಲಿ ವಿಫಲರಾಗಿದ್ದಾರೆ. ಭಗವದ್ಗೀತೆಯಲ್ಲಿ ಬರುವ ಬ್ರಾಹ್ಮಣ, ಕ್ಷತ್ರಿಯ , ವೈಶ್ಯ, ಶೂದ್ರ ಇವರುಗಳು ಸಮಾಜದಲ್ಲಿ ನಾವು ನೋಡುವ ಅಥವಾ ಮಾಡಿಕೊಂಡ ಶ್ರೇಣೀಕೃತ ವ್ಯವಸ್ಥೆ ಅಲ್ಲ. ಇದು ಜೀವಗಳಲ್ಲಿ ಸ್ವಭಾವ ಮತ್ತು ಸ್ವಭಾವಕ್ಕೆ ತಕ್ಕಂತೆ ಮಾಡುವ ಕೆಲಸದಿಂದಾಗಿ ಗುರುತಿಸುವ ಒಂದು ಪ್ರಕ್ರಿಯೆ. ಹಾಗಾಗಿಯೇ ಜ್ಯೋತಿಷ್ಯದಲ್ಲಿ ಯಾರದ್ದೇ ಜಾತಕ ನೋಡುವಾಗ ವ್ಯಕ್ತಿಯ ಬಗ್ಗೆ ಇವೆಲ್ಲ ವಿವರಣೆ ಇರುತ್ತದೆ. ಅವನು ಯಾವ ಯೋನಿ, ಗಣ, ವರ್ಣ (ಇದೇ ಈ ಜಾತಿಯ ಜಗಳಕ್ಕೆ ಮುಂದಿನ ದಿನಗಳಲ್ಲಿ ಕಾರಣವಾಗಿದ್ದು.) ಹೀಗೆ. ನನ್ನ ಅಧ್ಯಯನದಲ್ಲಿ ನಾನು ಕಂಡಿದ್ದು ಈ ಗಣ, ಯೋನಿ , ವರ್ಣಗಳೆಲ್ಲ ಎಷ್ಟು ನಿಖರವಾಗಿರುತ್ತವೆ ಎಂದರೆ ವ್ಯಕ್ತಿ ತನ್ನ ಮೂಲ ದ್ರವ್ಯವಾದ ಯೋನಿ, ಗಣ ಹಾಗೂ ವರ್ಣದ ಸ್ವಭಾವದಂತೆ ನಡೆದುಕೊಳ್ಳುತ್ತಾನೆ. ರಾಕ್ಷಸ, ದೇವ ಮತ್ತು ಮನುಷ್ಯ ಗಣಗಳ ವರ್ಣನೆ ಏನು ಬರುತ್ತದೆ ಭಗವದ್ಗೀತೆಯಲ್ಲಿ ಅದು ಯಾವುದೋ ಜನಾಂಗಕ್ಕೆ ಸೀಮಿತವಾದದ್ದಲ್ಲ. (ದ್ರಾವಿಡರು ರಾಕ್ಷರಾಗಿ ಪರಿಗಣಿಸಲ್ಪಟ್ಟರು, ಆರ್ಯರು ದೇವರಾದರು ಎನ್ನುವುದು, ರಾಕ್ಷಸರೆಂದು ಪರಿಗಣಿಸಿ ದೂರವಿಟ್ಟಿದ್ದರು ಎನ್ನುವದೆಲ್ಲ ಅಧ್ಯಯನದ ಕೊರತೆಯಿಂದ ಹುಟ್ಟಿದ ಅಪಸವ್ಯಗಳು.) ಇದು ಮನುಷ್ಯನ ಸ್ವಭಾವವನ್ನು ವೈಜ್ಞಾನಿಕವಾಗಿ ತಿಳಿಸುವ ಮಾಧ್ಯಮ. ಭಗವದ್ಗೀತೆಯಲ್ಲಿ ಕೃಷ್ಣ ಈ ಸ್ವಭಾವವನ್ನು ಗುರುತಿಸಿಕೊಂಡು ಅವುಗಳಿಂದ ಬಿಡುಗಡೆಗೊಳ್ಳುತ್ತ ಹೋಗುವುದು ಹೇಗೆ? ಎನ್ನುವುದನ್ನು ಮನಶಾಸ್ತ್ರೀಯ ತಜ್ಞನಾಗಿ, ಆಧ್ಯಾತ್ಮಿಕ ಗುರುವಾಗಿ ಹೇಳುತ್ತಾನೆ. ಅದಕ್ಕೇ ಆತನಿಗೆ ಕೃಷ್ಣಂ ವಂದೇ ಜಗದ್ಗುರುಂ ಎನ್ನಲಾಯಿತು. ಈ ಗುಣ, ಗಣ, ವರ್ಣಗಳೆಲ್ಲ ಕೇವಲ ಮನುಷ್ಯನಿಗೆ ಸೀಮಿತವಾದವುಗಳೇ? ಇಲ್ಲ. ಒಂದು ಮಂಗನಂತಹ ಪ್ರಾಣಿಗಳಿಗೂ ಇದು ಅನ್ವಯವಾಗುತ್ತದೆ. ಒಂದು ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಯಾವ ಪ್ರಾಣಿಯಾಗಿದ್ದರೂ ಸರಿ ಈ ಗುಣ, ಗಣ, ವರ್ಣಗಳಂತೆಯೇ ನಡೆದುಕೊಳ್ಳುತ್ತವೆ. ಇದಕ್ಕೆ ಸಾಕ್ಷಿಯಾಗಿ ನಾವು ಮನೆಯಲ್ಲಿ ಸಾಕುವ ನಾಯಿ, ಪ್ರಾಣಿಗಳಿಂದ ಹಿಡಿದು ಕೀಟ, ಪಕ್ಷಿಗಳವರೆಗೆ ಗಮನಿಸಬಹುದು. ನನ್ನ ಈ ಹೇಳಿಕೆಗೆ ನಿಮ್ಮ ತಕರಾರಿದ್ದರೆ ಇವತ್ತಿನಿಂದ ನಿಮ್ಮ ಹತ್ತಿರದಲ್ಲಿ ಹುಟ್ಟುವ ಮಗುವಿನಿಂದ ಹಿಡಿದು ಪಶು, ಪಕ್ಷಿಗಳ ಹುಟ್ಟಿದ ಸಮಯವನ್ನು ಹಾಕಿ ಜಾತಕ ಸಿದ್ದಪಡಿಸಿ. ಅದರ ಯೋನಿ, ಗಣ, ವರ್ಣ ಇವುಗಳನ್ನೂ, ನೀವು ಮಾಡಿದ ಜಾತಕರ ಸ್ವಭಾವ, ನಡತೆ, ಮನಸ್ಥಿತಿಯನ್ನೆಲ್ಲ ಗಮನಿಸಿ ಪಟ್ಟಿಮಾಡಿ. ಆಮೇಲೆ ಇಲ್ಲಿ ಕಮೆಂಟಿಸಿ. ಇದು ಭಗವದ್ಗೀತೆ ಶಾಲಾ ಮಕ್ಕಳಿಗೆ ಸರಳವಾಗಿ ಪಠ್ಯ ಮಾಡಿಸುವ ಗ್ರಂಥವಲ್ಲ ಎಂಬುದಕ್ಕೆ ಉದಾಹರಣೆ.

ಶಾಲೆಗಳಲ್ಲಿ ಭಗವದ್ಗೀತೆಯನ್ನು ಹೇಳಿಕೊಡುವುದು ಹೊಸತಲ್ಲ. ಯೋಗ ಹೊರತಲ್ಲ. ನಾವು ನಮ್ಮ ಹೈಸ್ಕೂಲಿನಲ್ಲಿ ಭಗವದ್ಗೀತೆಯ ಕಂಠಪಾಠ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆವು. ಪ್ರತಿ ವಿದ್ಯಾರ್ಥಿಯೂ ಭಗವದ್ಗೀತೆಯ ಒಂದು ಅಧ್ಯಾಯವನ್ನು ಓದುತ್ತಿದ್ದರು. ವರ್ಷಕ್ಕೊಮ್ಮೆ ಯೋಗಾಭ್ಯಾಸ ಶಿಬಿರ ನಡೆಯುತ್ತಿತ್ತು. ಆದರೆ ಇವುಗಳ ಪರಿಣಾಮ ಎಷ್ಟು ಮಕ್ಕಳ ಜೀವನದಲ್ಲಿ ಕಂಡಿದೆ ಎಂಬುದರ ಅಧ್ಯಯನವಾಗಬೇಕಿತ್ತು, ಆಗಲಿಲ್ಲ. ಆದರೂ ಸುತ್ತಮುತ್ತಲಿನ ನಮ್ಮ ಬ್ಯಾಚ್ ಮೇಟ್ ಗಳನ್ನು ತೆಗೆದುಕೊಂಡರೆ ಹೆಚ್ಚಿಗೆ ಏನು ಬದಲಾವಣೆ ಆಗಿಲ್ಲ ಎಂದೇ ಹೇಳಬಹುದು. ಯಾಕೆಂದರೆ ಅದೇ ಕೃಷ್ಣ ಹೇಳಿದ್ದಾನಲ್ಲ, ನಿಮ್ಮ ನಿಮ್ಮ ವರ್ಣ, ಗುಣ, ಗಣಗಳಿಗೆ ತಕ್ಕಂತೆ ನಿಮ್ಮ ಗ್ರಹಿಸುವ, ಯೋಚಿಸುವ ಸಾಮರ್ಥ್ಯ ಬೆಳೆಯುತ್ತದೆ. ಇದಕ್ಕೆ ಸಾಕ್ಷಿಯಾಗಿ ಇವತ್ತು ಬ್ರಾಹ್ಮಣ ಜಾತಿಯವರ ಮನೆಯಲ್ಲಿ ಹುಟ್ಟಿದ್ದೂ ವೈಶ್ಯ, ಶೂದ್ರ ಮತ್ತು ಕ್ಷಾತ್ರಗುಣಗಳನ್ನು, ಕರ್ಮಗಳನ್ನು ಜನರು ವ್ಯಕ್ತಪಡಿಸುತ್ತಾರೆ. ದಲಿತರ ಮನೆಯಲ್ಲಿ ಹುಟ್ಟಿದ್ದರೂ ಅಂಬೇಡ್ಕರ್ ಅಂತಹ ಮೇಧಾವಿಗಳು ಕಾಣಸಿಗುತ್ತಾರೆ. ರಾಜರ ಅರಮನೆಗಳಲ್ಲಿ ರಣಹೇಡಿಗಳು ಹುಟ್ಟುತ್ತಾರೆ. ಇವೆಲ್ಲವನ್ನೂ ನೀವು ಗಮನಿಸಿದರೆ ಈ ವರ್ಣಸಂಕರ, ಸತ್ವ,ರಜ,ತಮೊಗುಣ, ರಾಕ್ಷಸ, ದೇವ, ಮನುಷ್ಯಗಣಗಳ ವರ್ಗೀಕರಣ ತಿಳಿಯುತ್ತದೆ. ದೊಡ್ಡವರಿಗೇ ಅರ್ಥವಾಗದ ಈ ಕ್ಲಿಷ್ಟ ವಿಷಯಗಳು ಮಕ್ಕಳಿಗೆ ಸುಲಭಕ್ಕೆ ಅರ್ಥವಾಗುವುದೇ?

ಬೇಕೋ? ಬೇಡವೊ?- ನನ್ನ ಹಿಂದಿನೆರಡು ವಿಷಯಗಳನ್ನು ಓದಿದ ಮೇಲೆ ನೀವು ಗೊಂದಲಕ್ಕೆ ಬೀಳಬಹುದು. ಶಾಲೆಗಳು ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕೊಡಬೇಕು ಎನ್ನುತ್ತೇನೆ. ಆದರೆ ಭಗವದ್ಗೀತೆಯಂತಹ ವ್ಯಕ್ತಿತ್ವ ವಿಕಸನದ ಗ್ರಂಥದ ಪಠ್ಟ ಶಾಲೆಗಳಲ್ಲಿ ಬೇಕಾ? ಎಂದು ಪ್ರಶ್ನೆಯನ್ನೂ ಮಾಡುತ್ತೇನೆ. ಹಾಗಿದ್ದರೆ ನಾನು ಏನನ್ನು ಪ್ರತಿಪಾದಿಸುತ್ತೇನೆ. ಇದು ಶಾಲೆಯ ಆಡಳಿತ ಮಂಡಳಿಗೆ ಬಿಟ್ಟ ವಿಚಾರವಾಗಬೇಕು ಎಂದು ನಾನು ಹೇಳುತ್ತೇನೆ. ಯಾಕೆಂದರೆ ಈ ರಾಜ್ಯದಲ್ಲಿ/ದೇಶದಲ್ಲಿ ಹಿಂದೂ, ಕ್ರಿಶ್ಚಿಯನ್, ಮುಸಲ್ಮಾನ ಸೇರಿದಂತೆ ಹಲವು ಸಮುದಾಯಗಳ ಶಿಕ್ಷಣ ಸಂಸ್ಥೆಗಳಿವೆ. ಅವರಲ್ಲಿ ಹೆಚ್ಚಾಗಿ ಅವರ ಸಮುದಾಯದ ಜನರ ಮಕ್ಕಳೇ ಕಲಿಯುತ್ತಿದ್ದಾರೆ. ಆಗ ನೀವು ಭಗವದ್ಗೀತೆಯನ್ನು ಶಾಲಾ ಹಂತದಲ್ಲಿಯೇ ಕಲಿಸಬೇಕು ಎಂದು ಹೊರಟರೆ ಅದು ಸರಿಯಾಗುತ್ತದೆಯೇ? ಯಾಕೆಂದರೆ ಭಗವದ್ಗೀತೆ ಜನಮಾನಸದಲ್ಲಿ ಒಂದು ಧಾರ್ಮಿಕ ಗ್ರಂಥವೇ ಹೊರತು ವ್ಯಕ್ತಿತ್ವವಿಕಸನದ ಗ್ರಂಥವಲ್ಲ. ನೀವು ಭಗವದ್ಗೀತೆಯ ಯಾವ ಅಧ್ಯಾಯವನ್ನು ಮಕ್ಕಳಿಗೆ ಹೇಳಿಕೊಡುತ್ತೀರಿ ಎನ್ನುವುದೂ ಮುಖ್ಯ. ಕರ್ಮಯೋಗ ಹೇಳಿಕೊಟ್ಟರೆ ತಲೆಕೆಡಿಸಿಕೊಳ್ಳಬೇಡ ಅದಾಗಲೇ ಇವರೆಲ್ಲ ಸತ್ತು ನನ್ನೊಳಗಿದ್ದಾರೆ, ನೀನೊಂದು ನೆಪ ಮಾತ್ರ ಹೂಡು ಬಾಣ, ನಿನ್ನಲದಲ್ಲದೆಂದು ಯುದ್ಧ ಮಾಡು ಎನ್ನುವುದನ್ನೇ ಸರಿ ಬಿಡು ಕೃಷ್ಣನೇ ಹೇಳಿದ್ದಾನೆ, ನಾನು ಸಾಯಿಸಿದರೂ ಏನಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಯಾಕೆ ತೆಗೆದುಕೊಳ್ಳಬಾರದು? ಇನ್ನು ಸಾಂಖ್ಯಯೋಗ ಹೇಳಿಕೊಡುತ್ತೀರಾ? ಅಹಂ ಬ್ರಹ್ಮಾಸ್ಮಿ ಎನ್ನುವ ಶಂಕರಾಚಾರ್ಯರ ಮಾತನ್ನೇ ಅಪಥ್ಯವೆಂದು ಪ್ರತಿಪಾದಿಸುವವರಿದ್ದಾರೆ. ದ್ವೈತ, ಅದ್ವೈತದ ಮಧ್ಯೆಯೇ ಜಗಳಗಳಾಗುವುದಿದೆ. ಅಂತದರಲ್ಲಿ ಮಕ್ಕಳಿಗೆ ಇದು ಏನು ಅರ್ಥವಾದೀತು. ಅದರ ಬದಲು ನಮಗೆಲ್ಲ ಹೇಳಿಕೊಡುತ್ತಿದ್ದ ಭಗವದ್ಗೀತೆಯ ಭಕ್ತಿಯೋಗವೇ ಎಷ್ಟೋ ಉತ್ತಮ. ಸುಮ್ಮನೆ ಕಂಠಪಾಠ ಮಾಡಿದರಾಯಿತು. ತೆಗೆದುಕೊಂಡರೂ ಮಕ್ಕಳು ಓ ಭಗವಂತನಿಗೆ ಭಕ್ತಿಯಿಂದ ಏನು ಕೊಟ್ಟರೂ ನಡೆಯುತ್ತದಂತೆ, ಯಾವ ರೂಪದಲ್ಲಿ ಪೂಜಿಸಿದರೂ ಅವನಿಗೇ ಸೇರುತ್ತದಂತೆ ಎನ್ನುವ ಪ್ರಾಥಮಿಕ ಆಧ್ಯಾತ್ಮಿಕತೆಯನ್ನು ರೂಢಿಸಿಕೊಳ್ಳಬಹುದು. ಆದರೆ ಒಂದು ನೀವು ಈ ಭಾಗವನ್ನೇ ಸೇರಿಸಿದರೂ ಮುಸಲ್ಮಾನರ ನಿರಾಕಾರನಾದ ಭಗವಂತನ ಬಗ್ಗೆ, ಕ್ರಿಶ್ಚಿಯನ್ ರ ಪ್ರೇಮವೇ ದೇವರು ಎನ್ನುವ ಬಗ್ಗೆ, ಸೂಫಿ ಸಾಹಿತ್ಯ ಮತ್ತು ಭಕ್ತಿಯ ಪರಂಪರೆಯ ಬಗ್ಗೆ, ಬುದ್ಧನ ಜಾತಕ ಕತೆಗಳು ಸೇರಿದಂತೆ ಭಾರತದ ಪ್ರಮುಖ ಧಾರ್ಮಿಕ ಗ್ರಂಥಗಳಲ್ಲಿ ಬರುವ ಮನುಷ್ಯ ಜೀವಪರ ನಿಲುಮೆಗಳನ್ನು ಯಥಾವತ್ತಾಗಿ ಸೇರಿಸಬೇಕು. ಅಲ್ಲಿ ಹಿಂದುತ್ವ ಮತ್ತು ರಾಷ್ಟ್ರೀಯವಾದದ ಲೇಪವಿರಕೂಡದು. ಆದ್ದರಿಂದ ಭಗವದ್ಗೀತೆ ಶಾಲಾ ಪಠ್ಯವನ್ನು ಸೇರುವುದಾದರೆ ಯಾವ ಭಾಗ ಹೇಗೆ ಇರಬೇಕು ಎನ್ನುವುದು ಸ್ಪಷ್ಟವಾಗಬೇಕು. ಅದರ ಬಗ್ಗೆ ಸಮಾಜ ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚೆಗಳಾಗಬೇಕು. ಜೊತೆಗೆ ಅದು ಧರ್ಮಗಳ ಹಿನ್ನೆಲೆಯನ್ನು ಮೀರಿ ವಿಶ್ವವ್ಯಾಪಿಯಾದ ಸತ್ಯವನ್ನು ಪಸರಿಸುವಂತಾಗಬೇಕು. ಇಲ್ಲವಾದರೆ ಸುಮ್ಮನಿರುವುದು ಲೇಸು.



ಪ್ರಸ್ತುತತೆ -  ಸಮಾಜದಲ್ಲಿ ಬುರ್ಖಾ, ಹಿಜಾಬು, ತಲಾಖು, ಹಲೀಮು ಇತ್ಯಾದಿಗಳಿಂದ ಧೃವೀಕರಣವನ್ನು ಆರಂಭಿಸಿದ ಆರೋಪವನ್ನು ಪ್ರಸ್ತುತ ಸರ್ಕಾರಗಳು ಎದುರಿಸುತ್ತಿವೆ. ಜೊತೆಗೆ ಬಲಪಂಥೀಯ ವಿಚಾರಗಳು ಸಮಾಜದ ವೈಚಾರಿಕರನ್ನೂ ದಾರಿತಪ್ಪಿಸುವ ಮಟ್ಟಿಗೆ ``ಛಾಲೆಂಜಿಂಗ್’ ಆಗಿವೆ. ಈ ಹಂತದಲ್ಲಿ ಭಗವದ್ಗೀತೆ, ಧ್ಯಾನದಂತಹ ಪ್ರಯೋಗಗಳ ಅವಶ್ಯಕತೆ ಇದೆಯಾ? ಇದ್ದರೆ ಇಲ್ಲಿಯವರೆಗೆ ಭಗವದ್ಗೀತೆ ಓದಿದ, ಯೋಗಾಭ್ಯಾಸ ಮಾಡಿದ ಮಕ್ಕಳು (ಈಗವರು ಸುಮಾರು 30-40ರ ವಯಸ್ಸಿನಲ್ಲಿದ್ದಾರೆ) ಹೇಗೆ ಅವುಗಳ ಪ್ರಭಾವಕ್ಕೆ ಒಳಗಾಗಿದ್ದಾರೆ ಎನ್ನುವ ಸಮೀಕ್ಷೆ ನಡೆಯಲಿ. ಆ ನಂತರ ಈ ವಿಷಯದ ಪ್ರಸ್ತಾಪವಾಗಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಯಾರಿಗಾದರೂ ನೆನಪಿದೆಯೆ?

ಭ್ರಷ್ಟಾಚಾರ ಎನ್ನುವುದು ವ್ಯವಸ್ಥೆಯಲ್ಲಲ್ಲ, ಮನಸ್ಸಿನಲ್ಲಿ ಇರುತ್ತದೆ. ವ್ಯವಸ್ಥೆ ಮನಸ್ಸಿನ ಕನ್ನಡಿ ಮಾತ್ರ. ಮನುಷ್ಯನಿಗೆ ಅಧಿಕಾರ ಸಿಗುವುದು ಅರ್ಹತೆ, ಯೋಗ್ಯತೆ ಮತ್ತು ...